ಪುತ್ತೂರು:ಹಿಂದೂ ಧರ್ಮ ಮತ್ತು ಧಾರ್ಮಿಕ ಮುಖಂಡರ ಬಗ್ಗೆ ಇಲ್ಲಿನ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ಪ್ರಚೋದನಕಾರಿ ಮತ್ತು ಅಶ್ಲೀಲ ಪದಬಳಕೆಯ ಸಂದೇಶಗಳಿಗೆ ಆಕ್ರೋಶ ವ್ಯಕ್ತವಾಗಿದೆ.
ಪುತ್ತೂರಿನ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಅವರು ತಮ್ಮ ಫೇಸ್ಬುಕ್ನಲ್ಲಿ ಧಾರ್ಮಿಕ ಮುಖಂಡರು ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
‘ಅಧಿಕಾರಿಯು ಕರ್ತವ್ಯದಲ್ಲಿದ್ದುಕೊಂಡು ಸಂವಿಧಾನಬಾಹಿರ, ಅಶ್ಲೀಲ ಪದ ಬಳಸಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದಾರೆ. ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆತಂದು ಸಾಮಾಜಿಕ ಸ್ವಾಸ್ಥ್ಯ ಕದಡುವ ಯತ್ನ ಮಾಡಿದ್ದಾರೆ ಮತ್ತು ಕರ್ತವ್ಯ ಲೋಪಎಸಗಿದ್ದಾರೆ’ ಎಂಬ ಆರೋಪ ಮತ್ತು ಆಕ್ರೋಶ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಬಗ್ಗೆ, ಬ್ರಾಹ್ಮಣ ಸಮುದಾಯದ ಬಗ್ಗೆ, ಗೋವುಗಳ ಬಗ್ಗೆ ಅಶ್ಲೀಲ ಪದ ಬಳಸಿ ಬರೆಯಲಾಗಿದೆ. ಈ ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ.
ತಪ್ಪನ್ನು ತಪ್ಪೆಂದು ಹೇಳುವವ ನಾನು: ‘ನಾನು ಬಡವರ, ಶೋಷಿತ ವರ್ಗದ, ಕಷ್ಟದಲ್ಲಿರುವವ ಪರ ಹೋರಾಟ ಮಾಡುವವ. ಕಣ್ಣಲ್ಲಿ ನೋಡಿದ್ದನ್ನು ನೋಡಿದ ಹಾಗೆ ಹೇಳುವ, ತಪ್ಪನ್ನು ತಪ್ಪೆಂದು ಹೇಳುವ ವ್ಯಕ್ತಿ ನಾನು. ಸತ್ಯ ವಿಚಾರವನ್ನು ತಿಳಿಸಲು ಯಾರ ಭಯವೂ ನನಗಿಲ್ಲ’ ಎಂದು ಸಂಜೀವ ಕಾಣಿಯೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಹಿಂದೂ ಸಮುದಾಯ ಆರಾಧಿಸಿಕೊಂಡು ಬರುತ್ತಿರುವ ಕೊರಗಜ್ಜನ ಹೋಲಿಕೆಯ ವೇಷಧರಿಸಿ, ಸಾಲೆತ್ತೂರಿನಲ್ಲಿ ನಡೆದಿದ್ದ ಮುಸ್ಲಿಂ ಸಮುದಾಯದ ವಿವಾಹ ಔತಣಕೂಟದಲ್ಲಿ ಮದುಮಗ ಹಿಂದೂ ಧರ್ಮದ ನಂಬಿಕೆಗೆ ಘಾಸಿಯುಂಟುಮಾಡಿದ ಘಟನೆಯ ವೀಡಿಯೋ ತುಣಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.