ADVERTISEMENT

ಧರೆಗುರುಳಿದ ಮರ: ಮನೆಗೆ ಹಾನಿ, ರಸ್ತೆ ಸಂಚಾರಕ್ಕೆ ಅಡ್ಡಿ, ಮೆಸ್ಕಾಂಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:03 IST
Last Updated 26 ಜುಲೈ 2024, 14:03 IST
ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಮರ ರಸ್ತೆಗೆ, ವಿದ್ಯುತ್ ತಂತಿ ಮೇಲೆ ಬಿದ್ದಿದೆ
ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಮರ ರಸ್ತೆಗೆ, ವಿದ್ಯುತ್ ತಂತಿ ಮೇಲೆ ಬಿದ್ದಿದೆ   

ಪುತ್ತೂರು: ಮಳೆ, ಗಾಳಿಯಿಂದಾಗಿ ತಾಲ್ಲೂಕಿನ ವಿವಿಧೆಡೆ ಮರ ಉರುಳಿ ಮನೆಗಳಿಗೆ, ವಿದ್ಯುತ್‌ ತಂತಿಗಳಿಗೆ ಹಾನಿಯಾಗಿದೆ. ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.

ಬನ್ನೂರು ನಿವಾಸಿ, ನಾಟಕ ಕಲಾವಿದ ಅಶೋಕ್ ಎಂಬುವರ ಹೆಂಚಿನ ಮನೆ ಮೇಲೆ ಶುಕ್ರವಾರ ಸಂಜೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸಮೀಪದ ಚಾರ್ಪಟ್ಟೆಯ ರಾಮಣ್ಣ ಪೂಜಾರಿ ಎಂಬುವರ ಹೆಂಚಿನ ಚಾವಣಿ ಮೇಲೆ ಅಕೇಶಿಯಾ ಮರ ಬಿದ್ದು ನಷ್ಟ ಉಂಟಾಗಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀರಾಮ್ ಪಕ್ಕಳ ಕರ್ನೂರುಗುತ್ತು, ಎನ್.ಮೂಸನ್, ಕುಮಾರನಾಥ್ ಪೂಜಾರಿ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್ ಬಳಿ ಶುಕ್ರವಾರ ಸಂಜೆ ಮರ ಉರುಳಿ ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳಕ್ಕೆ ಭೇಟಿ ನೀಡಿದ ಮುಂಡೂರು ಗ್ರಾಮ ಪಂಚಾಯಿತಿ ಸದಸ್ಯ ಕಮಲೇಶ್ ಎಸ್.ವಿ., ಸ್ಥಳೀಯರಾದ ಅಶೋಕ್ ಎಸ್.ಡಿ., ಪ್ರಮೋದ್ ಭಕ್ತಕೋಡಿ, ಪುನೀತ್ ಪಾಲೆತ್ತಗುರಿ, ಮನೀಶ್ ಕಡ್ಯ ಸೇರಿ ಕೊಂಬೆಗಳನ್ನು ತೆರವುಗೊಳಿಸಿದರು. ಬಳಿಕ ಅರಣ್ಯ ಇಲಾಖೆಯವರು ಬಂದು ಮರ ತೆರವುಗೊಳಿಸಿದರು.

ಸರ್ವೆಯ ಕಲ್ಲಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿದ್ದ ಮರ ರಸ್ತೆ ಹಾಗೂ ವಿದ್ಯುತ್‌ ಕಂಬಗಳಿಗೆ ಉರುಳಿದೆ. ವಿದ್ಯುತ್ ಕಂಬ ಮರಿದು ರಸ್ತೆಗೆ ಬಿದ್ದಿದೆ. ಬೈಕ್‌ ಒಂದು ಮುರಿದುಬಿದ್ದ ಮರ ಮತ್ತು ವಿದ್ಯುತ್ ಕಂಬಗಳ ನಡುವೆ ಸಿಲುಕಿಕೊಂಡಿತ್ತು. ಸವಾರ ಅಪಾಯದಿಂದ ಪಾರಾಗಿದ್ದಾರೆ.

ಒಳಮೊಗ್ರು ಗ್ರಾಮದ ಕುಂಬ್ರ ಜಂಕ್ಷನ್ ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಮರವೊಂದು ಗುರುವಾರ ರಾತ್ರಿ ರಸ್ತೆಗೆ ಉರುಳಿದೆ. ಹೆದ್ದಾರಿ ಪಕ್ಕದಲ್ಲಿ ಹಾದು ಹೋಗುವ ಎಚ್.ಟಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದರಿಂದ ಕಂಬ ಹಾಗೂ ತಂತಿಗಳಿಗೆ ಹಾನಿಯಾಗಿದೆ.

ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಮೊಟ್ಟೆತ್ತಡ್ಕ ತಿರುವು ಭಾಗದಲ್ಲಿ ಮರವೊಂದು ಶುಕ್ರವಾರ ಉರುಳಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿದರು.

ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್ ಬಳಿ ಶುಕ್ರವಾರ ಸಂಜೆ ಮರ ಉರುಳಿ ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸಮೀಪದ ಚಾರ್ಪಟ್ಟೆ ಎಂಬಲ್ಲಿ ಮರವೊಂದು ಮನೆಯ ಮೇಲೆ ಉರುಳಿ ಚಾವಣಿಗೆ ಹಾನಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.