ಮಂಗಳೂರು: ಸೈದ್ಧಾಂತಿಕ ಬದ್ಧತೆ, ಪ್ರಯೋಗಶೀಲ ಮನಸ್ಸು ಮತ್ತು ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ ರಾಜೀವ್ ಗಾಂಧಿ ಅವರ ತ್ಯಾಗ ಶ್ರೇಷ್ಠವಾದದ್ದು. ಅವರ ದೂರದೃಷ್ಟಿ, ಉತ್ತಮ ಆಡಳಿತದಿಂದ ರಾಷ್ಟ್ರದ ಗೌರವ ಹೆಚ್ಚಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 31ನೇ ಪುಣ್ಯಸ್ಮರಣೆಯಲ್ಲಿ ಅವರು ಮಾತನಾಡಿದರು.
‘1985ರಲ್ಲಿ ರಾಜೀವ್ ಗಾಂಧಿ ಅವರು ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನವನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು, ರಾಜೀವ್ ಗಾಂಧಿ ಯುವಕರಿಗೆ ಕಂಪ್ಯೂಟರ್ ‘ಡಬ್ಬ’ ತಂದು ನಿರುದ್ಯೋಗ ಹೆಚ್ಚಿಸಲು ಹೊರಟಿದ್ದಾರೆ ಎಂದಿದ್ದರು. ಆದರೆ, ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಶಿಷ್ಯ ನರೇಂದ್ರ ಮೋದಿ ಅವರು ದೇಶದಲ್ಲಿ ಶೇ 45 ರಷ್ಟು ನಿರುದ್ಯೋಗ ಸೃಷ್ಟಿಸಿ ಇತಿಹಾಸ ನಿರ್ಮಿಸಿದ್ದಾರೆ. ರಾಜೀವ್ ಗಾಂಧಿ ಅವರನ್ನು ಮೋದಿಗೆ ಯಾವತ್ತೂ ಹೋಲಿಸಲು ಆಗುವುದಿಲ್ಲ. ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರ’ ಎಂದು ಹೇಳಿದರು.
‘ಸರ್ವ ಧರ್ಮ ಸಮಬಾಳು ಎಂದು ಎಲ್ಲ ಧರ್ಮವನ್ನು ಸಮನಾಗಿ ಕಾಣಬೇಕೆಂಬ ಪ್ರತಿಪಾದನೆಯನ್ನು ಸಹಿಸಲಾಗದವರು, ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡುತ್ತಾರೆ. ಕಾಂಗ್ರೆಸ್ ಯಾವತ್ತೂ ನಾಥೂರಾಮ್ ಗೋಡ್ಸೆಯನ್ನು ದೇಶದ ಮೊದಲ ಭಯೋತ್ಪಾದಕ, ಉಗ್ರಗ್ರಾಮಿ ಎಂದು ಕರೆಯುತ್ತದೆ. ಏಕೆಂದರೆ ಆತ ದೇಶದ ರಾಷ್ಟ್ರಪಿತನನ್ನು ಕೊಲೆ ಮಾಡಿದ ಪಾತಕಿ. ಆರ್ಎಸ್ಎಸ್ ಅಥವಾ ಬಿಜೆಪಿಯಾಗಲಿ ಗೋಡ್ಸೆಯನ್ನು ಕೊಲೆಗಡುಕ ಎಂದು ಕರೆಯುವುದಿಲ್ಲ. ಬಲಿದಾನ ಮಾಡಿದ ರೀತಿಯಲ್ಲಿ ಮಾತನಾಡುತ್ತಾರೆ’ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಮೊಹೀಯುದ್ದೀನ್ ಬಾವ, ಜೆ.ಆರ್.ಲೋಬೊ, ಪ್ರಮುಖರಾದ ಇಬ್ರಾಹಿಂ ಕೋಡಿಜಾಲ್, ಮಿಥುನ್ ರೈ, ಮಮತಾ ಗಟ್ಟಿ, ಶಶಿಧರ್ ಹೆಗ್ಡೆ, ಬೇಬಿ ಕುಂದರ್, ವೆಲೇರಿಯನ್ ಸಿಕ್ವೇರಾ, ಜೆ.ಅಬ್ದುಲ್ ಸಲೀಂ, ಅಬ್ದುಲ್ ರವೂಫ್, ಪದ್ಮನಾಭ ನರಿಂಗಾನ, ಮೊಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ಮಹಾಬಲ ಮಾರ್ಲ, ಲುಕ್ಮಾನ್ ಬಂಟ್ವಾಳ, ಸವಾದ್ ಸುಳ್ಯ, ವಿಶ್ವಾಸ್ ಕುಮಾರ್ ದಾಸ್, ಅಬ್ಬಾಸ್ ಅಲಿ, ಸುಭಾಷ್ ಚಂದ್ರ ಕೊಲ್ನಾಡ್, ನೀರಜ್ ಚಂದ್ರ ಪಾಲ್, ಶುಭೋದಯ ಆಳ್ವ, ಟಿ.ಕೆ.ಸುಧೀರ್, ಶಬೀರ್ ಎಸ್., ಮೊಹಮ್ಮದ್ ಅಲ್ತಾಫ್, ಸಿ.ಎಂ. ಮುಸ್ತಫಾ, ರಮಾನಂದ ಪೂಜಾರಿ, ನಿತ್ಯಾನಂದ ಶೆಟ್ಟಿ, ರಮಾನಾಥ ವಿಟ್ಲ, ಭಾಸ್ಕರ್ ರಾವ್, ದಿನೇಶ್ ರಾವ್, ಲಕ್ಷ್ಮೀ ನಾಯರ್, ಪ್ರತಿಭಾ ಕುಳಾಯಿ, ಮಂಜುಳಾ ನಾಯ್ಕ್, ಸಬಿತಾ ಮಿಸ್ಕಿತ್, ಶಾಂತಲಾ ಗಟ್ಟಿ ಪಾಲ್ಗೊಂಡಿದ್ದರು. ಶಾಹುಲ್ ಹಮೀದ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.