
ಮಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅನುದಾನ ಸಿಕ್ಕಿದೆ. ದೇವರಾಜ ಅರಸು ಭೂಮಸೂದೆ ಜಾರಿಗೊಳಿಸಿದಾಗ ಜಿಲ್ಲೆಯ ಬಡಜನರಿಗೆ ಹೆಚ್ಚಿನ ಪ್ರಯೋಜನ ಸಿಕ್ಕಿತ್ತು. ಸಿದ್ದರಾಮಯ್ಯ ಜಾರಿಗೊಳಿಸಿದ 94 ಸಿ ಮತ್ತು 94 ಸಿಸಿ ಅಡಿ ಭೂಮಂಜೂರಾತಿಯಲ್ಲಿ ಅತಿ ಹೆಚ್ಚು ಮಂದಿ ಜಮೀನು ಪಡೆದದ್ದು ನಮ್ಮ ಜಿಲ್ಲೆಯಲ್ಲಿ' ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕೊಯಿಲದ ಪಶುವೈದ್ಯಕೀಯ ಕಾಲೇಜಿಗೆ, ಕಡೇಶಿವಾಲಯ– ಅಜಿಲಮೊಗರು ನಡುವೆ ಸೌಹಾರ್ದ ಸೇತುವೆಗೆ, ಬಂಟ್ವಾಳದ ಪಂಜೆ ಮಂಗೇಶರಾವ್ ಭವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದರು. ನಂತರ ಬಂದ ಸರ್ಕಾರಗಳು ಬಿಡಿಗಾಸನ್ನೂ ಬಿಡುಗಡೆ ಮಾಡದ ಕಾರಣ ಈ ಯೋಜನೆಗಳು ನನೆಗುದಿಗೆ ಬಿದ್ದಿವೆ. ಸ್ಥಳೀಯ ಶಾಸಕರು ಮುತುವರ್ಜಿ ವಹಿಸಿ ಈ ಯೋಜನೆಗಳನ್ನು ಪೂರ್ಣಗೊಳಿಸಬೇಕು’ ಎಂದರು.
‘ದ್ವೇಷ ಭಾಷಣ ನಿಷೇಧ ಮಸೂದೆಯನ್ನು ಬಿಜೆಪಿ ಮುಖಂಡರು ವಿರೋಧಿಸುತ್ತಿರುವುದರ ಉದ್ದೇಶವೇನು? ಅವರಿಗೆ ದ್ವೇಷ ಭಾಷಣ ಮಾಡುವುದೆಂದರೆ ಇಷ್ಟವೇ’ ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಅಪ್ಪಿ, ಅಬ್ಬಾಸ್ ಅಲಿ, ದಿನೇಶ್ ಮೂಳೂರು, ನಿತ್ಯಾನಂದ ಶೆಟ್ಟಿ, ಯೋಗೀಶ್ ಕುಮಾರ್ ಇಬ್ರಾಹಿಂ ನವಾಜ್, ಪದ್ಮನಾಭ ಕೋಟ್ಯಾನ್, ಟಿ.ಕೆ.ಸುಧೀರ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.