ಮಂಗಳೂರು: ಶೌರ್ಯದ ಮೂಲಕ ಚಿರಸ್ಥಾಯಾಗಿರುವ ರಾಣಿ ಅಬ್ಬಕ್ಕಳ ಪರಂಪರೆ ನಾಡಿಗೆ ಸ್ಫೂರ್ತಿದಾಯಕವಾಗಿದೆ. ಇಂತಹ ಪರಂಪರೆಯ ಪುನರ್ ನಿರ್ಮಾಣ ಇಂದಿನ ಅಗತ್ಯ ಎಂದು ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ್ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ರಾಜ್ಯದಾದ್ಯಂತ ಸಂಚರಿಸಿದ ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಧನೆಯಿಂದ ಮಾತ್ರ ವ್ಯಕ್ತಿಯ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿರಲು ಸಾಧ್ಯ. 500 ವರ್ಷಗಳ ನಂತರವೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉಳ್ಳಾಲದ ವೀರರಾಣಿ ಅಬ್ಬಕ್ಕಳ ಹೆಸರು ಸ್ಮರಣೆಯಲ್ಲಿ ಇದೆಯೆಂದಾದರೆ ಅದಕ್ಕೆ ಅವರ ಸಾಧನೆ, ಶೌರ್ಯವೇ ಕಾರಣ. ಅಬ್ಬಕ್ಕ ರಾಣಿಯ ಆಡಳಿತ, ಸಾಮಾಜಿಕ, ಧಾರ್ಮಿಕ ವಿಚಾರಗಳು, ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ದಿಟ್ಟತನ ಯುವಜನರಿಗೆ ಪ್ರೇರಣೆಯಾಗಬೇಕು ಎಂದರು.
ಧ್ಯಕ್ಷತೆ ವಹಿಸಿದ್ದ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ರವಿ ಮಂಡ್ಯ ಮಾತನಾಡಿ, ಅಬ್ಬಕ್ಕಳ 500ನೇ ಜನ್ಮ ಜಯಂತಿಯ ಪ್ರಯುಕ್ತ ಎಬಿವಿಪಿ ವತಿಯಿಂದ ಎರಡು ರಥಗಳು ರಾಜ್ಯದಾದ್ಯಂತ ಸಂಚರಿಸಿವೆ. ಆ ಮೂಲಕ ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್ನಲ್ಲಿ ಅಬ್ಬಕ್ಕಳನ್ನು ಪರಿಚಯಿಸಿದಂತೆ ಆಗಿದೆ. ಜಾತಿ, ಪಕ್ಷಭೇದ ಮರೆತು ಸಮಾಜ ಈ ರಥಯಾತ್ರೆಗೆ ಬೆಂಬಲ ನೀಡಿದೆ ಎಂದರು.
ರಾಣಿ ಅಬ್ಬಕ್ಕ ಮನೆತನದ ಮೂಡುಬಿದಿರೆಯ ಕುಲದೀಪ್ ಚೌಟ, ಬೆಳ್ತಂಗಡಿ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ಕುಮಾರ್ ಜೈನ್, ರಥಯಾತ್ರೆಯ ಸಂಚಾಲಕರಾದ ಗುರುಪ್ರಸಾದ್, ಯಶವಂತ್ ನಟರಾಜ್ ಉಪಸ್ಥಿತರಿದ್ದರು.
‘ಅಭಯರಾಣಿ- ವೀರರಾಣಿ ಅಬ್ಬಕ್ಕ’ ಪುಸ್ತಕ ಬಿಡುಗಡೆ ಮಾಡಲಾಯಿತು. ಪುಸ್ತಕದ ಸಂಪಾದಕ ಯೋಗೀಶ್ ಕೈರೋಡಿ ಅವರನ್ನು ಗೌರವಿಸಲಾಯಿತು.
ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ಸ್ವಾಗತಿಸಿದರು. ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ ವಂದಿಸಿದರು. ಪ್ರಾಂತ ವಿದ್ಯಾರ್ಥಿನಿ ಪ್ರಮುಖ್ ಸುಧಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.