ADVERTISEMENT

ವಿಮಾನ ನಿಲ್ದಾಣದಲ್ಲಿ ರ್‍ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 16:10 IST
Last Updated 15 ಆಗಸ್ಟ್ 2021, 16:10 IST

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ರ‍್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಇದರಿಂದ ಯುಎಇಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಭಾರತದಿಂದ ತೆರಳುವ ವಿಮಾನಕ್ಕೆ ಹಲವು ತಿಂಗಳು ನಿಷೇಧ ಹೇರಿದ್ದ ಯುಎಇ ಸರ್ಕಾರ, ಆಗಸ್ಟ್ 5ರಂದು ಈ ನಿಷೇಧ ಹಿಂತೆಗೆದು ಕೆಲವು ಷರತ್ತುಗಳೊಂದಿಗೆ ಪ್ರಯಾಣಿಸಲು ಅನುಮತಿ ನೀಡಿದೆ. ಯುಎಇ ರೆಸಿಡೆನ್ಸ್ ವಿಸಾ ಹೊಂದಿರಬೇಕು, ಎರಡು ಡೋಸ್ ಲಸಿಕೆ ಪಡೆದಿರಬೇಕು, 48 ಗಂಟೆ ಒಳಗಿನ ಪರೀಕ್ಷೆಯ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು ಎಂಬ ಷರತ್ತುಗಳ ಜತೆಗೆ, ಪ್ರಯಾಣಕ್ಕೆ ಹೊರಡುವ ಮುನ್ನ ವಿಮಾನ ನಿಲ್ದಾಣದಲ್ಲಿಯೂ ರ‍್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಬೇಕು ಎಂಬ ಹೊಸ ಷರತ್ತು ಸೇರ್ಪಡೆ ಮಾಡಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರಿನಿಂದ ಯುಎಇಗೆ ವಿಮಾನ ಯಾನ ಆರಂಭವಾಗಿಲ್ಲ. ಕರಾವಳಿಯ ಕರ್ನಾಟಕದ ಸಾವಿರಾರು ಅನಿವಾಸಿಗಳು ಯುಎಇಗೆ ತೆರಳಲು ಬೆಂಗಳೂರು, ಮುಂಬೈ ವಿಮಾನ ನಿಲ್ದಾಣದ ಮೊರೆ ಹೋಗಬೇಕಾಗಿತ್ತು. ಅನಿವಾಸಿ ಕನ್ನಡಿಗರ ಈ ಸಮಸ್ಯೆಯನ್ನು ‘ಕನ್ನಡಿಗಾಸ್ ಫೆಡರೇಷನ್’ ಸಂಚಾಲಕ ಹಿದಾಯತ್ ಅಡ್ಡೂರ್ ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಗಮನಕ್ಕೆ ತಂದಾಗ, ಶೀಘ್ರದಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಈ ವ್ಯವಸ್ಥೆ ಆರಂಭವಾಗಿದ್ದು, ಶೀಘ್ರವೇ ಮಂಗಳೂರು ಮೂಲಕ ಯುಎಇ ವಿಮಾನಯಾನ ಆರಂಭಗೊಳ್ಳಲಿದೆ.

ADVERTISEMENT

ಈ ಬಗ್ಗೆ ಹಿದಾಯತ್ ಅಡ್ಡೂರ್, ಕೆಎನ್ಆರೈ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಇ ಮೂಳೂರು, ಬಿ.ಡಬ್ಲ್ಯು.ಎಫ್ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಸಲೀಂ, ಕನ್ನಡ ಮಿತ್ರರು ಯುಎಇ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಜಿಲ್ಲಾಧಿಕಾರಿಯನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.