ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಭವನ ನಿರ್ಮಾಣ

ರೆಡ್ ಕ್ರಾಸ್ ಪದಾಧಿಕಾರಿಗಳ ಜೊತೆ ಸಂವಾದ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 14:05 IST
Last Updated 5 ಫೆಬ್ರುವರಿ 2020, 14:05 IST
ಪತ್ರಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಮಾತನಾಡಿದರು. ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಇದ್ದಾರೆ
ಪತ್ರಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಮಾತನಾಡಿದರು. ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಇದ್ದಾರೆ   

ಮಂಗಳೂರು: ‘ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ‘ರೆಡ್‌ಕ್ರಾಸ್ ಭವನ’ ನಿರ್ಮಾಣ ಮಾಡಲಾಗುವುದು’ ಎಂದು ಜಿಲ್ಲಾ ಶಾಖೆಯ ಅಧ್ಯಕ್ಷ ಶಾಂತರಾಮ ಶೆಟ್ಟಿ ಹೇಳಿದರು.

ದ.ಕ. ಜಿಲ್ಲಾ ಪತ್ರಕರ್ತರ ಸಂಘವು ನಗರದ ಪತ್ರಿಕಾಭವನದಲ್ಲಿ ಬುಧವಾರ ಹಮ್ಮಿಕೊಂಡ ರೆಡ್‌ಕ್ರಾಸ್ ಪದಾಧಿಕಾರಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿ 25 ಸೆಂಟ್ಸ್ ಜಮೀನು ಮಂಜೂರಾಗಿದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವ ದಾಸ್ತಾನು ಮಳಿಗೆ,ತರಬೇತಿ ಕೇಂದ್ರ, ಕಚೇರಿಗಳು ಹಾಗೂ ಸಭಾಭವನ ನಿರ್ಮಾಣವಾಗಲಿದೆ’ ಎಂದರು.

ADVERTISEMENT

‘ತಾಲ್ಲೂಕು ಮಟ್ಟದ ರೆಡ್‌ಕ್ರಾಸ್ ಶಾಖೆಗಳನ್ನು ಪುನಶ್ಚೇತನಗೊಳಿಸಿ, ಗ್ರಾಮೀಣ ಭಾಗದಲ್ಲಿ ಜಾಗೃತಿ ಹಾಗೂ ಸೇವೆ ವಿಸ್ತರಿಸಲು ಚಿಂತಿಸಲಾಗಿದೆ. ಜಿಲ್ಲೆಯಲ್ಲಿ 2,044 ಅಜೀವ ಸದಸ್ಯರಿದ್ದು, 2,500ಕ್ಕೆ ಹೆಚ್ಚಿಸುವುದು ಹಾಗೂ ಸುಮಾರು 100 ಮಹಾಪೋಷಕರನ್ನು ಹೊಂದುವ ಗುರಿ ಇದೆ’ ಎಂದು ವಿವರಿಸಿದರು.

‘ಮಂಗಳೂರು ವಿಶ್ವವಿದ್ಯಾಲಯದ ಸಹಕಾರದಲ್ಲಿ 210 ಕಾಲೇಜುಗಳಲ್ಲಿ ರೆಡ್‌ಕ್ರಾಸ್ ಯುವ ಸಮಿತಿ ರಚಿಸಲಾಗಿದೆ. ಪಣಂಬೂರಿನಲ್ಲಿ ಎನ್‌ಎಂಪಿಟಿ ಸಹಯೋಗದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧ ನೀಡಲಾಗುತ್ತಿದೆ. ಪದವಿನಂಗಡಿಯಲ್ಲಿ ಪ್ರಧಾನ ಮಂತ್ರಿ ಜನೌಷಧಾಲಯ ತೆರೆಯಲಾಗುವುದು’ ಎಂದರು.

‘ಶಿಬಿರಗಳನ್ನು ಆಯೋಜಿಸಿ, ರಕ್ತದಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ರಕ್ತ ಒದಗಿಸಲಾಗುತ್ತಿದ್ದು, ಇತರರಿಗೂ ಅತ್ಯಂತ ಕಡಿಮೆ ದರದಲ್ಲಿ ರಕ್ತ ನೀಡಲಾಗುತ್ತಿದೆ’ ಎಂದು ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮಾ ಮಾಹಿತಿ ನೀಡಿದರು.

‘ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘಗಳಿಂದ ರೆಡ್‌ಕ್ರಾಡ್‌ಗೆ ನೆರವು ನೀಡುವ ಬಗ್ಗೆ ಸರ್ಕಾರ ಪತ್ರ ಬರೆದಿತ್ತು. ಇದನ್ನು ಕೆಲವು ಗ್ರಾ.ಪಂ.ಗಳು ಮಾತ್ರ ಪಾಲಿಸುತ್ತಿವೆ. ಕೆಲವು ಜಿಲ್ಲೆ ಹಾಗೂ ತಾಲ್ಲೂಕು ಆಡಳಿತಗಳು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂ, ಹೂಗುಚ್ಛ ಇತ್ಯಾದಿ ಔಪಚಾರಿಕ ಕ್ರಮಗಳಿಗೆ ಬಳಸುವ ಹಣವನ್ನು ಚೆಕ್ ಮೂಲಕ ರೆಡ್‌ಕ್ರಾಸ್‌ಗೆ ನೀಡುವ ಪರಿಪಾಠವಿದೆ. ಇದನ್ನು ಜಿಲ್ಲೆಯಲ್ಲೂ ಜಾರಿಗೆ ತಂದರೆ ಉತ್ತಮ’ ಎಂದು ಆಶಯ ವ್ಯಕ್ತಪಡಿಸಿದರು.

ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಬಿ. ರವೀಂದ್ರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.