
ವಂಚನೆ
ಮಂಗಳೂರು: ಷೇರು ವಹಿವಾಟಿನ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ₹32 ಲಕ್ಷ ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಾನು ಸೆ.10ರಂದು ಫೇಸ್ಬುಕ್ ನೋಡುತ್ತಿದ್ದಾಗ ‘ಕಾವ್ಯಾ ಶೆಟ್ಟಿ’ ಎಂಬ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಒಪ್ಪಿಕೊಂಡು ಅವರ ಜೊತೆ ಚಾಟ್ ಮಾಡಿದ್ದೆ. ಮುಂಬೈನಲ್ಲಿ ಷೇರ್ ಟ್ರೇಡಿಂಗ್ ಕೆಲಸ ಮಾಡಿಕೊಂಡಿರುವುದಾಗಿ ಕಾವ್ಯಾ ಶೆಟ್ಟಿ ತಿಳಿಸಿದ್ದರು. ಷೇರ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಸಲಹೆ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಕೊಂಡಿಯನ್ನು ವಾಟ್ಸ್ ಆ್ಯಪ್ನಲ್ಲಿ ಕಳುಹಿಸಿದ್ದರು. ಅವರ ಸಲಹೆ ಮೇರೆಗೆ ಸೆ. 13ರಂದು ಅವರು ಸೂಚಿಸಿದ ಖಾತೆಗೆ ₹ 40 ಸಾವಿರ ಹಣ ಪಾವತಿಸಿದ್ದೆ. ಪ್ರತಿಯಾಗಿ ನನಗೆ ಲಾಭಾಂಶ ಎಂದು ಹೇಳಿ ₹ 9,504 ಹಣ ಮರಳಿಸಿದ್ದರು. ನಂತರ ₹ 2 ಲಕ್ಷ ಪಾವತಿಸಿದ್ದೆ. ಅದಕ್ಕೂ ಲಾಭಾಂಶ ಎಂದು ಹೇಳಿ ₹ 23,760 ಜಮೆ ಮಾಡಿದ್ದರು. ಸೆ. 13ರಿಂದ ಅ. 24ರವರೆಗೆ ಹಂತ ಹಂತವಾಗಿ ಒಟ್ಟು ₹ 32.07 ಲಕ್ಷ ಹಣವನ್ನು ಅವರು ಸೂಚಿಸಿದ ಖಾತೆಗಳಿಗೆ ಪಾವತಿಸಿದ್ದೆ. ಆ ಹಣವನ್ನು ಮರಳಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.