ಬಂಟ್ವಾಳ: ಇಲ್ಲಿನ ಸಜಿಪ ಮುನ್ನೂರು ಗ್ರಾಮದ ಬೇಂಕೆ ಇಂದಿರಾನಗರ ನಿವಾಸಿ ಬೇಬಿ ಎಂಬವರ ಮನೆಯಲ್ಲಿ ಸೋಮವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪರಸ್ಪರ ಹಲ್ಲೆ ನಡೆದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ.
'ಬೇಬಿ ಅವರು ಕರೆ ಮಾಡಿ ಯೋಜನೆ ಮಾಹಿತಿ ಕೇಳಿದ್ದರು. ಕಾರ್ಕಳ ಸಾಣೂರಿನ ಶೈಲಜಾ ಶೆಟ್ಟಿ, ದಿನೇಶ್, ಗಣೇಶ್ ಹಾಗೂ ಇನ್ನೊಬ್ಬರ ಜೊತೆ ಅವರ ಮನೆಗೆ ಸೋಮವಾರ ಹೋಗಿದ್ದೆ. ಆಗ ಅಲ್ಲಿ 25 ಮಂದಿ ಹೆಂಗಸರು ಹಾಗೂ ಮೂವರು ಗಂಡಸರು ಸೇರಿದ್ದರು. ಅಲ್ಲಿ ನಾನು ಮತ್ತು ಶೈಲಜಾ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಹಿತಿ ನೀಡಿದ್ದೆವು. ಆಗ ಅಲ್ಲಿ ಸೇರಿದ್ದವರು ‘ತಪ್ಪು ಮಾಹಿತಿ ನೀಡಿದ್ದೀರಿ’ ಎಂದು ತಕರಾರು ತೆಗೆದಿದ್ದರು. ನನ್ನನ್ನು ಹಾಗೂ ನನ್ನ ಜೊತೆ ಬಂದಿದ್ದವರನ್ನು ಕೂಡಿ ಹಾಕಿ, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಶೈಲಜಾ ಅವರು ಅಸ್ವಸ್ಥಗೊಂಡಿದ್ದು ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಆರೋಪಿಸಿ ಬಾಳೆಪುಣಿ ಗ್ರಾಮದ ನಿವಾಸಿ ರವೀಂದ್ರ ಶೆಟ್ಟಿ ದೂರು ನೀಡಿದ್ದಾರೆ.
ಈ ಘಟನೆ ಬಗ್ಗೆ ಬೇಬಿ ಅವರು ಕೂಡ ದೂರು ನೀಡಿದ್ದು, ‘ಕಾರ್ಕಳ ಸಾಣೂರು ಶೈಲಜಾ ಶೆಟ್ಟಿ , ಮುಡಿಪು ರವೀಂದ್ರ ಶೆಟ್ಟಿ, ಗಣೇಶ್ ಕುಂಟಲಪಾಡಿ, ಕೃಷ್ಣ ಸರಪಾಡಿ , ಯೋಗಿಶ್ ಶೆಟ್ಟಿ ಸಾಣೂರು ಎಂಬವರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಗ್ಗೆ ತಕರಾರು ತೆಗೆದು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಸಂಘದ ಸದಸ್ಯರಿಗೂ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದ ಗಾಯಗೊಂಡ ನಾನು ಬಿ.ಸಿ.ರೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆದಾಖಲಾಗಿದ್ದೆ ಎಂದು ಆರೋಪಿಸಿದ್ದಾರೆ’ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.