ಮಂಗಳೂರು: ಎಲಿಯ ಕನ್ಸ್ಟ್ರಕ್ಷನ್ ಕಂಪನಿಯ ಅವ್ಯವಹಾರ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಮೂರು ಕಾರುಗಳ ಪೈಕಿ ಜಾಗ್ವಾರ್ ಕಾರನ್ನು ಪೊಲೀಸರೇ ಮಾರಾಟ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
₹30 ಕೋಟಿ ವಂಚನೆ ಸಂಬಂಧ ಎಲಿಯ ಕನ್ಸ್ಟ್ರಕ್ಷನ್ ಆಂಡ್ ಬಿಲ್ಡರ್ಸ್ ಕಂಪನಿಯ ಜಾಗ್ವಾರ್, ಪೋರ್ಷೆ ಹಾಗೂ ಬಿಎಂಡಬ್ಲ್ಯು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪೈಕಿ ಎರಡು ಕಾರುಗಳನ್ನು ಸ್ವಂತಕ್ಕೆ ಬಳಸಿಕೊಂಡಿದ್ದ ಸಿಸಿಬಿ ಪೊಲೀಸರು, ಆರೋಪಿಯೊಬ್ಬನ ಮೂಲಕವೇ ಜಾಗ್ವಾರ್ ಕಾರು ಮಾರಾಟ ಮಾಡಿಸಿದ್ದರು.
ಈ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿ ಪ್ರವೀಣ್ ಸೂದ್ ಅವರು ಸಿಐಡಿಗೆ ಸೂಚಿಸಿದ್ದರು. ಅದರಂತೆ ಸಿಐಡಿ ಅಧಿಕಾರಿಗಳು ವರದಿ ನೀಡುವಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಸೂಚನೆ ನೀಡಿದ್ದರು. ಈ ಕುರಿತು ಡಿಸಿಪಿ ವಿನಯ್ ಗಾಂವ್ಕರ್ ಅವರ ವರದಿಯನ್ನು ಆಧರಿಸಿ, ಸಿಐಡಿಯಿಂದ ಡಿಜಿಪಿಗೆ ತನಿಖಾ ವರದಿ ಸಲ್ಲಿಕೆಯಾಗಿದೆ.
ಎರಡು ಕಾರುಗಳನ್ನು ಪೊಲೀಸರು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದು, ಜಾಗ್ವಾರ್ ಕಾರನ್ನು ಪ್ರಕರಣದ ಆರೋಪಿಯಿಂದಲೇ ಮಾರಾಟ ಮಾಡಿಸಿ, ಬಂದ ಹಣದಲ್ಲೂ ಅವ್ಯವಹಾರ ಮಾಡಿದ್ದರು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.