ಹರೀಶ್ ಪೂಂಜಾ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ
ಮಂಗಳೂರು: ವಿಧಾನಸಭಾ ಚುನಾವಣೆ ಬಳಿಕ 2023ರ ಮೇ 22ರಂದು ಬೆಳ್ತಂಗಡಿಯಲ್ಲಿ ನಡೆದಿದ್ದ ಬಿಜೆಪಿ ಅಭಿನಂದನಾ ಸಭೆಯಲ್ಲಿ ತುಳುವಿನಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂಗಳ ಹತ್ಯೆ ಮಾಡಿದ್ದಾರೆ’ಎಂದು ಆರೋಪಿಸಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರ ಹೆಸರು ಉಲ್ಲೇಖಿಸಿ ಸಭೆಯಲ್ಲಿ ಮಾತನಾಡಿದ್ದ ಪೂಂಜ, ‘ಸಿದ್ದರಾಮಯ್ಯ ಪರ ನೀವು ಮತ ಕೇಳಿದ್ದೀರಲ್ಲವೇ? ಬಜರಂಗದಳ ನಿಷೇಧಿಸುತ್ತೇನೆ ಎಂದ ಕಾಂಗ್ರೆಸ್ ಪರ ಮತ ಕೇಳಿದ್ದೀರಲ್ಲವೇ? ಸತ್ಯಣ್ಣ... ನಿಮ್ಮದು ಯಾವ ಹಿಂದುತ್ವ ಎಂದು ಬೆಳ್ತಂಗಡಿಯ ಜನ ಕೇಳುತ್ತಿದ್ದಾರೆ. ಇದಕ್ಕೆ ಸತ್ಯಣ್ಣ ಉತ್ತರ ನೀಡಬೇಕು’ ಎಂದು ಹೇಳಿದ್ದರು.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರ ಹಿಂದುತ್ವದ ಬಗ್ಗೆಯೂ ಹರೀಶ್ ಪೂಂಜ ಈ ಕಾರ್ಯಕ್ರಮದಲ್ಲಿ ಪ್ರಶ್ನೆ ಎತ್ತಿದ್ದರು.
ಇದಕ್ಕೆ ಉತ್ತರಿಸಲು 2023ರ ಮೇ 26ರಂದು ಸುದ್ದಿಗೋಷ್ಠಿ ನಡೆಸಿದ್ದ ಮಹೇಶ್ ಶೆಟ್ಟಿ ತಿಮರೋಡಿ, ‘ತಾಲ್ಲೂಕಿನ ಪ್ರಥಮ ಪ್ರಜೆಯಾಗಿರುವ ಶಾಸಕ ಹರೀಶ್ ಪೂಂಜ, ‘ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ನಾನೂ ಹೇಳುತ್ತೇನೆ, ಸಿದ್ದರಾಮಯ್ಯ ಅವರು ತಕ್ಷಣ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಹರೀಶ್ ಪೂಂಜ ಏನೇ ಇರಲಿ, ಅವರು ನಮ್ಮ ಶಾಸಕ. ಅವರು ಆರೋಪ ಮಾಡಿದ್ದು ಹೌದು’ ಎಂದಿದ್ದರು.
‘ನಮ್ಮ ಶಾಸಕರು ಹೇಳಿದ ಮೇಲೆ ನಾವು ಹೇಳುತ್ತೇವೆ. ಸಿದ್ದರಾಮಯ್ಯ ತಕ್ಷಣ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕು. ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಇನ್ನೂ ಏಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿಲ್ಲ. ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಬೇಕು. ಇಲ್ಲವೇ, ‘ನಾನು ಕೊಲೆ ಮಾಡಿಲ್ಲ ಹರೀಶ್ ಪೂಂಜ ಸುಳ್ಳ’ ಎಂದು ಅವರು ಸಾಬೀತು ಮಾಡಬೇಕು. ಒಂದೋ ಹರೀಶ್ ಪೂಂಜ ಜೈಲಿಗೆ ಹೋಗಬೇಕು ಅಥವಾ ಸಿದ್ದರಾಮಯ್ಯ ಜೈಲಿಗೆ ಹೋಗಬೇಕು. ಎರಡರಲ್ಲಿ ಒಂದು ಆಗಬೇಕು’ ಎಂದು ಆಗ್ರಹಿಸಿದ್ದರು.
ದಾಖಲಾಗಿದ್ದ ಎಫ್ಐಆರ್: ಹರೀಶ್ ಪೂಂಜ ಮಾಡಿದ್ದ ಭಾಷಣದಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಯತ್ನದ ಆರೋಪದ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಐಪಿಸಿ ಸೆಕ್ಷನ್ 153 (ಗಲಭೆಗೆ ಕುಮ್ಮಕ್ಕು), ಸೆಕ್ಷನ್ 153 ಎ (ಧರ್ಮದ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟಿಸಲು ಉತ್ತೇಜನ ನೀಡುವುದು), ಸೆಕ್ಷನ್ 505 (1) (ಬಿ), 505 (1) (ಸಿ), ಮತ್ತು 505 (2) (ಸುಳ್ಳು ಸುದ್ದಿ ಹರಡುವಿಕೆ) ಅಡಿ ಪ್ರಕರಣ ದಾಖಲಾಗಿತ್ತು.
ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆ ಬಗ್ಗೆ ಬೆಳ್ತಂಗಡಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಮಹೇಶ್ ಶೆಟ್ಟಿ ತಿಮರೋಡಿ, ‘ಹರೀಶ್ ಪೂಂಜ ನೀಡಿದ್ದ ಹೇಳಿಕೆಯನ್ನು ನಾನು ಪ್ರಶ್ನಿಸಿದ್ದೆ. ಅದರಲ್ಲಿ ಏನು ತಪ್ಪು? ಎಂದು ಪ್ರಶ್ನಿಸಿದ್ದರು.
‘ಶಾಸಕ ಹರೀಶ್ ಪೂಂಜ ಅವರನ್ನು ಮೊದಲು ಬಂಧಿಸಿ. ಯಾವತ್ತೋ ನೀಡಿದ್ದ ಹೇಳಿಕೆ ಆಧರಿಸಿ ಹೇಳಿಕೆ ನೀಡುವುದಲ್ಲ. ನಮ್ಮ ಬಳಿ ದಾಖಲೆ ಇದೆ’ ಎಂದು ಗೃಹ ಸಚಿವರನ್ನುದ್ದೇಶಿಸಿ ಹೇಳಿದರು.
‘ಇದೆಲ್ಲ ಎಸ್ಐಟಿ ತನಿಖೆ ನಿಲ್ಲಿಸುವ ಷಡ್ಯಂತ್ರ’ ಎಂದು ಆರೋಪಿಸಿದ ತಿಮರೋಡಿ, ‘ಲಕ್ಷಾಂತರ ಜನ ಈಗ ಸತ್ಯದ ಪರ ನಿಲ್ಲುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.