ಮಂಗಳೂರು: ನಗರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೊಟ್ಟಾರಚೌಕಿ ಬಳಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ‘ಸಿಂಧೂರ ವಿಜಯ’ ಉದ್ಯಾನವನ್ನು ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಪಾಲಿಕೆಯ ಬಂಗ್ರಕುಳೂರು ವಾರ್ಡ್ನಲ್ಲಿ ₹42.35 ಲಕ್ಷ ವೆಚ್ಚದಲ್ಲಿ ಸೈನಿಕರನ್ನು ಸ್ಮರಿಸುವ ಉದ್ಯಾನ ನಿರ್ಮಾಣಗೊಂಡಿದೆ. ಮೂಡಾ ಸದಸ್ಯರು, ಅಧಿಕಾರಿಗಳು ಮತ್ತು ಪಾಲಿಕೆಯ ಮಾಜಿ ಸದಸ್ಯರು, ಅಧಿಕಾರಿಗಳ ಸಮನ್ವಯದಿಂದ ಉದ್ಯಾನ ಉತ್ತಮವಾಗಿ ನಿರ್ಮಾಣಗೊಂಡಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ‘ಜಂಕ್ಷನ್ನಲ್ಲಿ ಸೈನಿಕರ ಸ್ಮಾರಕ ನಿರ್ಮಿಸುವ ಬೇಡಿಕೆಯನ್ನು ಹಿಂದಿನ ಕಾರ್ಪೊರೇಟರ್ ಮತ್ತು ಸಾರ್ವಜನಿಕರು ಸಲ್ಲಿಸಿದ್ದರು. ಸೈನಿಕರ ತ್ಯಾಗ, ಬಲಿದಾನ ಸ್ಮರಿಸುವ ನಿಟ್ಟಿನಲ್ಲಿ ಈ ಪಾರ್ಕ್ ಮಹತ್ವದ್ದಾಗಿದೆ. ಜಂಕ್ಷನ್ನಲ್ಲಿ ಇದು ಇರುವುದರಿಂದ ಆಕರ್ಷಣೀಯ ತಾಣವಾಗಲಿದೆ’ ಎಂದರು.
ಭಾರತವು ಪಾಕಿಸ್ತಾನದ ಉಗ್ರರ ಮೇಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಜಯ ಸಾಧಿಸಿದ ‘ಸಿಂಧೂರ ಕಾರ್ಯಾಚರಣೆ’ ಸದಾ ನೆನಪಿನಲ್ಲಿ ಉಳಿಯುವಂತಾಗಲು ‘ಸಿಂಧೂರ ವಿಜಯ’ ಎಂದು ನಾಮಕರಣ ಮಾಡಲಾಗಿದೆ ಎಂದರು.
ಪ್ರಾಧಿಕಾರದ ಸದಸ್ಯರಾದ ನೀರಾಜ್ ಚಂದ್ರ ಪಾಲ್, ಅಬ್ದುಲ್ ಜಲೀಲ್, ಸುಮನ್ ದಾಸ್, ಸಬಿತಾ ಮಿಸ್ಕಿತ್, ಆಯುಕ್ತಾ ಮೊಹಮ್ಮದ್ ನಜೀರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶ್ವಿನಿ, ಸಹಾಯಕ ಎಂಜಿನಿಯರ್ ಅಕ್ಬರ್ ಭಾಷಾ, ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಮನೋಜ್ ಕುಮಾರ್ ಕಿರಣ್ ಕುಮಾರ್ ಕೊಡಿಕಲ್, ರಂಜಿನಿ ಕೋಟ್ಯಾನ್, ಬಿಜೆಪಿ ಮುಖಂಡರಾದ ಸಿತೇಶ್ ಕೊಂಡೆ, ಆಶಿತ್ ನೋಂಡ, ಹರಿಪ್ರಸಾದ್ ಶೆಟ್ಟಿ, ಉಮೇಶ್ ಮಾಲರಾಯಸಾನ, ಸಂಜಿತ್ ಶೆಟ್ಟಿ, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.