ವಿಟ್ಲ: ‘ಕ್ರೈಸ್ತ ಶಿಕ್ಷಣ ನಮ್ಮ ಬದುಕಿಗೆ ಸುಂದರವಾದ ರೂಪ ನೀಡುತ್ತದೆ. ಇದರ ಮಹತ್ವವನ್ನು ಅರಿಯುವುದರ ಜೊತೆಗೆ ಸಮಾಜದಲ್ಲಿ ಮಾದರಿ ಪ್ರಜೆಗಳಾಗಿ ಬಾಳ್ವೆ ನಡೆಸಬೇಕು’ ಎಂದು ಸೂರಿಕುಮೇರು ಬೊರಿಮಾರ್ ಸೆಂಟ್ ಜೋಸೆಫ್ ಚರ್ಚಿನ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಹೇಳಿದರು.
ಸೂರಿಕುಮೇರುವಿನಲ್ಲಿರುವ ಸೆಂಟ್ ಜೋಸೆಫ್ ಚರ್ಚ್ ನಲ್ಲಿ ಭಾನುವಾರ ದಿವ್ಯ ಬಲಿಪೂಜೆಯನ್ನು ನೆರವೇರಿಸಿದ ಬಳಿಕ ಕ್ರೈಸ್ತ ಶಿಕ್ಷಣ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಅವರು ಆಶೀರ್ವಚನ ನೀಡಿದರು.
ಚರ್ಚ್ನ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಪಿರೇರಾ ಮಾತನಾಡಿ, ‘ಕ್ರೈಸ್ತ ಶಿಕ್ಷಣ ಸಾರಿ ಹೇಳುವ ಎಲ್ಲಾ ಸಂಸ್ಕಾರಗಳನ್ನು ಅಳವಡಿಸುವುದರ ಜೊತೆಗೆ ತಂದೆತಾಯಿಗೆ ವಿಧೇಯರಾಗಿ ಒಳ್ಳೆಯ ಜೀವನ ನಡೆಸಬೇಕು’ ಕರೆ ನೀಡಿದರು. ಸಿಸ್ಟರ್ ನ್ಯಾನ್ಸಿ, ಮೇರಿ ಡಿಸೋಜ, ಅನಿತಾ ಮಾರ್ಟೀಸ್, ಸ್ಟೀವನ್ ಪಾಯ್ಸ್, ಲೂಸಿ ಡಿಕುನ್ಹಾ ಉಪಸ್ಥಿತರಿದ್ದರು.
ಬಲಿಪೂಜೆಯ ಸಂದರ್ಭ ವಿದ್ಯಾರ್ಥಿಗಳು ಕ್ರೈಸ್ತ ಶಿಕ್ಷಣ ಪಡೆದಿರುವುದಕ್ಕೆ ಕೃತಜ್ಞತಾಪೂರ್ವಕವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸಿದರು. ಚರ್ಚ್ನ ಕ್ರೈಸ್ತ ಶಿಕ್ಷಣ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಿನ್ನದ ಪದಕ ಪಡೆದ ಜೆನಿಷ್ ಮಾರ್ಟಿಸ್ ಹಾಗೂ ಮನೆಮಂದಿಯನ್ನು ಗೌರವಿಸಲಾಯಿತು. ಕರ್ನಾಟಕ ಮಂಗಳೂರು ಕೊಂಕಣಿ ಸಂಸ್ಥೆಯಿಂದ ಆಯೋಜಿಸಿದ್ದ ಡಿಪ್ಲೊಮಾ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಐಡಾ ಲಸ್ರಾದೊ ಪ್ರಮಾಣಪತ್ರ ನೀಡಿ ಗೌರವಿಸಿದರು.
ಕ್ರೈಸ್ತ ಶಿಕ್ಷಣವನ್ನು ಬೋಧಿಸುತ್ತಿರುವ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ರೋಷನ್ ಬೊನಿಫಾಸ್ ಮಾರ್ಟಿಸ್ ಹಾಗೂ ಮೆಲಿಟಾ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು. ಕ್ರೈಸ್ತ ಶಿಕ್ಷಣ ದಿನಾಚರಣೆಯ ಅಂಗವಾಗಿ ಎಲ್ಲಾ ಆಮಂತ್ರಿತರಿಗೆ ಉಪಾಹಾರ, ಸಿಹಿ ತಿಂಡಿ ಹಾಗೂ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.