ಮಂಗಳೂರು: ಇಲ್ಲಿನ ನೆಹರು ಮೈದಾನದಲ್ಲಿ ಬುಧವಾರ ಬೆಳಿಗ್ಗೆ 7 ಗಂಟೆಗೆ ಮುಸ್ಲಿಂ ಬಾಂಧವರು ಶೇಖ್ ಸಕೀಬ್ ಸಲೀಂ ಉಮ್ರಿ ಅವರ ನೇತೃತ್ವದಲ್ಲಿ ನೂರಾರು ಮಂದಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕರಾವಳಿ ಭಾಗದ ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೂಡ ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಮಾಸದಲ್ಲಿ ದೇವರಿಗೆ ಮೊರೆ ಹೋದರೆ ಸಂಕಷ್ಟಗಳು ಈಡೇರುತ್ತವೆ ಎಂಬ ಭಾವನೆಯಿಂದ ಎಲ್ಲರೂ ಒಟ್ಟಾಗಿ ಸೇರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ಅಲ್ಲಾಹ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಮಳೆ ಬರುತ್ತದೆ. ಜನರಿಗೆ ಬಂದಿರುವಂತಹ ಕಷ್ಟಗಳು ದೂರಾಗಲಿವೆ. ಮಳೆ ಬಂದರೂ ಕಷ್ಟ, ಮಳೆ ಬಾರದೇ ಇದ್ದರೂ ಕಷ್ಟ, ಈಗ ಜನರ ಬವಣೆ ನೀಗಿಸಲು ಮಳೆ ಬರಲೇಬೇಕು. ಕುಡಿಯುವ ನೀರಿಗಾಗಿ ಪರಿತಪಿಸುವ ಜನರ ಕಷ್ಟಕ್ಕೆ ಅಲ್ಲಾಹ ಕೃಪೆ ತೋರಲಿ. ಶುದ್ಧ ಮನಸ್ಸಿನಿಂದ ಪವಿತ್ರ ರಂಜಾನ್ ಮಾಸದಲ್ಲಿ ಅಲ್ಲಾಹ ಮೊರೆ ಹೋಗಿದ್ದೇವೆ ಎಂದು ಶೇಖ್ ಸಕಿಬ್ ಸಲೀಂ ಉಮ್ರಿ ಹೇಳಿದರು.
ಈ ಸಂದರ್ಭದಲ್ಲಿ ಹಲವಾರು ಮುಸ್ಲಿಂ ಮುಖಂಡರು , ಮಹಿಳೆಯರು ಕೂಡ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಶಾಸಕ ವೇದವ್ಯಾಸ್ ಕಾಮತ್ ಕೂಡ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.