
ಮೂಡುಬಿದಿರೆ: ಸತ್ಪ್ರಜೆಗಳನ್ನು ನಿರ್ಮಿಸಲು ಮತ್ತು ಬಲಿಷ್ಠ ಭಾರತವನ್ನು ಕಟ್ಟಲು ಕ್ರೀಡೆ ಬುನಾದಿಯಾಗುತ್ತದೆ. ಅಂಥ ಕ್ರೀಡೆಗೆ ಆಳ್ವಾಸ್ ಸಂಸ್ಥೆ ನೀಡುವ ಮಹತ್ವ ಮತ್ತು ಕ್ರೀಡಾಕೂಟಗಳನ್ನು ಆಯೋಜಿಸುವ ವಿಧಾನ ಮಾದರಿ. ದೇಶದ ಎಲ್ಲ ಕ್ರೀಡಾಕೂಟಗಳಿಗೆ ಇಲ್ಲಿಯದು ಹೆಗ್ಗುರುತು ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ಷಿಪ್ಗೆ ಸೋಮವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಮಟ್ಟದಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯ ವರೆಗಿನ ಸಂಸ್ಕೃತಿಯ ಸಾರ ಆಳ್ವಾಸ್ನಲ್ಲಿದೆ ಎಂದ ಅವರು ವಿದ್ಯಾರ್ಥಿಗಳೇ ದೇಶದ ಭವಿಷ್ಯ ಎಂದರು.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹ್ಮದ್ ಮೊಹ್ಸಿನ್ ಮಾತನಾಡಿ ಕ್ರೀಡೆ ಏಕತೆಯ ಸಂಕೇತ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಧ್ವಜಾರೋಹಣ ನೆರವೇರಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ, ಕೂಟದ ವೀಕ್ಷಕ ವಿ.ಶಂಕರ್ ಮಾತನಾಡಿದರು.
ರಾಜೀವ ಗಾಂಧಿ ಆರೋಗ್ಯ ವಿವಿ ಕುಲಸಚಿವ ಅರ್ಜುನ್, ಮಾಜಿ ಸಚಿವ ಅಭಯಚಂದ್ರ ಜೈನ್, ಇಫ್ತಿಕರ್ ಅಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ ಪಾಲ್ಗೊಂಡಿದ್ದರು. ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ ಡಿಸೋಜ, ವೇಣುಗೋಪಾಲ ಹಾಗೂ ರಾಮಚಂದ್ರ ನಿರೂಪಿಸಿದರು. ಪ್ರೊ.ಮುತ್ತುರಾಜ್ ವಂದಿಸಿದರು. ತ್ರಿವರ್ಣದ ಬಲೂನುಗಳನ್ನು ಗಾಳಿಗೆ ಹಾರಿ ಬಿಟ್ಟು ಕ್ರೀಡಾಜ್ಯೋತಿ ಬೆಳಗಿದ ಬಳಿಕ ಕ್ರೀಡಾಪಟು ದೀಕ್ಷಿತಾ ರಾಮಕೃಷ್ಣ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಉದ್ಘಾಟನೆ ಸಮಾರಂಭದಲ್ಲಿ ಭಾರತೀಯ ಕಲಾ ಸಂಸ್ಕೃತಿ ಬಿಂಬಿಸಿದ ಮೆರವಣಿಗೆ ಗಮನ ಸೆಳೆಯಿತು. ಸಾಂಪ್ರದಾಯಿಕ ಕೊಂಬು ವಾದನ, ಗಣಪತಿ ಪ್ರತಿರೂಪ, ಕೊಡೆಗಳನ್ನು ಹಿಡಿದ ವಿದ್ಯಾರ್ಥಿನಿಯರು, ಘಟೋತ್ಕಜನ ರೂಪ, ಚೆಂಡೆ, ಪೂರ್ಣಕುಂಭ ಹಿಡಿದ ಸ್ತ್ರೀಯರು, ಮಣಿಪುರ ಸಂಸ್ಕ್ರತಿ, ತಟ್ಟಿರಾಯ, ಮರಗಾಲು, ತಮಟೆವಾದನ ಆಂಜನೇಯ, ಯಕ್ಷಗಾನದ ವೇಷಧಾರಿಗಳು, ವರಾಹ, ಸ್ಯಾಕ್ಸೊಫೋನ್, ಪುರುಷ–ಮಹಿಳೆಯರ ನಗಾರಿ, ದಪ್ಪು, ಡೊಳ್ಳುಕುಣಿತ, ನಂದಿ, ಬ್ಯಾಂಡ್ ಸೆಟ್, ಗೊಂಬೆ ಬಳಗಗಳು, ಹೊನ್ನಾವರದ ಬ್ಯಾಂಡ್, ನಾಸಿಕ್ ಬ್ಯಾಂಡ್, ಶಿಂಗಾರಿ ಮೇಳ, ಪಲ್ಲಕಿಯಲ್ಲಿ ಟ್ರೋಫಿಗಳು, ಎನ್ಸಿಸಿ ಕೆಡೆಟ್ಗಳು, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೋವರ್ಸ್ ಆ್ಯಂಡ್ ರೇಂಜರ್ಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.