ADVERTISEMENT

ಮೂಡುಬಿದಿರೆ: ಸಾವಿರ ಕಂಬ ಬಸದಿಯಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 17:00 IST
Last Updated 2 ಜುಲೈ 2019, 17:00 IST
ಮೂಡುಬಿದಿರೆಯ ಸಾವಿರ ಕಂಬ ಬಸದಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು
ಮೂಡುಬಿದಿರೆಯ ಸಾವಿರ ಕಂಬ ಬಸದಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು   

ಮೂಡುಬಿದಿರೆ: ಇಲ್ಲಿನ ಐತಿಹಾಸಿಕ ಸಾವಿರ ಕಂಬದ ಬಸದಿಯಲ್ಲಿ ಸೋಮವಾರ ರಾತ್ರಿ ಮುಖ್ಯದ್ವಾರದ ಬಾಗಿಲಿನ ಬೀಗ ಮುರಿದು ಕಳ್ಳತನ ನಡೆಸಲಾಗಿದೆ.

ಬಸದಿಯಲ್ಲಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿದು ಅಲ್ಲಿದ್ದ ನಗದನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಕಳವಾದ ಮೊತ್ತ ಎಷ್ಟೆಂಬುದು ಇನ್ನೂ ದೃಢಪಟ್ಟಿಲ್ಲ. ಬಸದಿಯ ಗರ್ಭಗುಡಿಗೂ ಕಳ್ಳರು ಪ್ರವೇಶಿಸಲು ಯತ್ನಿಸಿದ್ದರು ಅವರ ಪ್ರಯತ್ನ ವಿಫಲವಾಗಿದೆ.

ಘಟನೆ ಸ್ಥಳಕ್ಕೆ ಕ್ರೈಂ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್, ಎಸಿಪಿ ಉತ್ತರ ವಿಭಾಗ ಶ್ರೀನಿವಾಸ ಗೌಡ, ಮೂಲ್ಕಿ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಮೂಡುಬಿದಿರೆ ಠಾಣಾಧಿಕಾರಿ ದೇಜಪ್ಪ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಸದಿ ಆವರಣದಲ್ಲಿರುವ ಸಿಸಿ ಟಿವಿ ಕ್ಯಾಮೆರಾ ನಿಷ್ಕ್ರಿಯಗೊಂಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದ್ದು ಭದ್ರತೆಯ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳು ಬಸದಿಯ ಪ್ರಮುಖರಿಗೆ ತಿಳಿಸಿದ್ದಾರೆ. ‌

ADVERTISEMENT

ಶ್ರೀಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಅಮೆ ರಿಕ ಪ್ರವಾಸದಲ್ಲಿದ್ದಾರೆ. ಜೈನಮಠಕ್ಕೆ ಸೇರಿದ್ದ ಸಿದ್ಧಾಂತ ಮಂದಿರದ ಗುರು ಬಸದಿಯಲ್ಲಿ ಆರು ವರ್ಷಗಳ ಹಿಂದೆ ಭಾರಿ ಬೆಲೆಯ ವಿಗ್ರಹಗಳು ಕಳವಾಗಿತ್ತು. ಕೆಲವು ತಿಂಗಳುಗಳ ಬಳಿಕ ಪತ್ತೆಹಚ್ಚಿ ವಾಪಸ್‌ ತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.