ADVERTISEMENT

ಉಳ್ಳಾಲ | ‘ವಿದ್ಯಾರ್ಥಿಗಳ ಸಾಧನೆಯೇ ‌ಕಾಲೇಜಿನ ಭವಿಷ್ಯ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:40 IST
Last Updated 5 ಡಿಸೆಂಬರ್ 2025, 7:40 IST
 ಆಯುರ್ವೇದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
 ಆಯುರ್ವೇದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು   

ಉಳ್ಳಾಲ: ವಿದ್ಯಾರ್ಥಿಗಳ ಸಾಧನೆಯು ಕಾಲೇಜಿನ ಭವಿಷ್ಯ, ಗೌರವ ಮತ್ತು ಪರಿಚಯವಾಗಿದೆ. ದೂರದೃಷ್ಟಿ, ಶ್ರಮದಿಂದ ನಿಮ್ಮ ಭವಿಷ್ಯವನ್ನು ಹಾಗೂ ಸಮಾಜದ ಭವಿಷ್ಯವನ್ನೂ ರೂಪಿಸುತ್ತೀರಿ ಎಂದು ಮಂಗಳೂರು ಪೊಲೀಸ್‌ ಕಮಿಷನರ್ ಸುಧೀರ್‌ ಕುಮಾರ್‌ ರೆಡ್ಡಿ ‌ಹೇಳಿದರು.

ನಾಟೆಕಲ್‌ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ಬ್ಯಾಚ್‌ನ ಶಿಷ್ಯೋಪನಯನೀಯ ಸಂಸ್ಕಾರ, ಆಯುರ್‌ಪ್ರವೇಶಿಕಾ ಮತ್ತು ಎನ್‌ಎಬಿಎಚ್‌ ಮಾನ್ಯತೆಯ ಅನುಮತಿ ಪತ್ರದ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಷ್ಠೆ ಎಂಬುದು ನಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಬೇಕಾದ ಮೂಲ ಮಂತ್ರವಾಗಿದೆ ಎಂದರು.

ADVERTISEMENT

ಕರ್ನಾಟಕ ರಾಜ್ಯ ಅಲೈಡ್‌ ಮತ್ತು ಹೆಲ್ತ್‌ ಕೇರ್‌ ಕೌನ್ಸಿಲ್‌ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್‌ ಫರೀದ್‌ ಮಾತನಾಡಿ, ಕಣಚೂರು ಸಂಸ್ಥೆ 10 ವರ್ಷಗಳಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಗಳ ಕುಲಸಚಿವ ಅರ್ಜುನ್‌ ಎಸ್‌.ಒಡೆಯರ್‌ ಮಾತನಾಡಿ, ನಮ್ಮ ಪಾರಂಪರಿಕ ಜ್ಞಾನವನ್ನು ವಿಜ್ಞಾನಾತ್ಮಕವಾಗಿ ಅಧ್ಯಯನ ಮಾಡಿದರೆ ಅದರ ಮಹತ್ವ ಇನ್ನಷ್ಟು ಸ್ಪಷ್ಟವಾಗಿ ಮನಗಾಣುತ್ತದೆ. ವಿದ್ಯಾರ್ಥಿ ಸಮುದಾಯವನ್ನು ಮಾದಕವಸ್ತುಗಳಿಂದ ದೂರವಿಟ್ಟು, ಜಾಗೃತಿಯುತ ಸಮಾಜ ನಿರ್ಮಾಣದ ಗುರಿ ಹೊಂದಲು ನಶಾ ಮುಕ್ತ್‌ ಭಾರತ್‌ ಅಭಿಯಾನ, ಪರೀಕ್ಷಾ ಫಲಿತಾಂಶವನ್ನು ಈಗ 7–10 ದಿನಗಳ ಒಳಗೆ ಪ್ರಕಟಿಸುವ ವೇಗದ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದರು.

ಭಾರತದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯ ಚಿಂತನೆಗಳನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿ ಹೊಸ ಆಯುರ್ವೇದ ಕಾಲೇಜು ಮಹತ್ವದ ಹೆಜ್ಜೆಯಾಗಿದೆ. ಸಮುದಾಯದ ಆರೋಗ್ಯ, ಸಾಮರಸ್ಯ ಮತ್ತು ಸುಖಶಾಂತಿಯನ್ನು ವೃದ್ಧಿಸಲು ಇದು ನಾವು ನೀಡುತ್ತಿರುವ ಬದ್ಧತೆಯ ಪ್ರತೀಕ ಎಂದು ನಿರ್ದೇಶಕ ಅಬ್ದುಲ್‌ ರೆಹಮಾನ್ ಹೇಳಿದರು.

ಎನ್‌ಎಬಿಎಚ್‌ ಮಾನ್ಯತೆಯ ಅನುಮತಿ ಪತ್ರವನ್ನು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಅವರಿಗೆ ಹಸ್ತಾಂತರಿಸಲಾಯಿತು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡಾ.ವಿದ್ಯಾಪ್ರಭಾ ಆರ್.‌ ಭಾಗವಹಿಸಿದ್ದರು. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್‌ ರಹಿಮಾನ್ ಸ್ವಾಗತಿಸಿದರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ. ಸುರೇಶ್‌ ನೆಗಲಗುಳಿ ವಂದಿಸಿದರು.

ಆಯುರ್ವೇದ ಕಾಲೇಜಿನ ಉದ್ಘಾಟನಾ ಸಮಾರಂಭವು ಸಂಸ್ಥೆಯ ಮೈಲಿಗಲ್ಲು ಮಾತ್ರವಲ್ಲ, ರಾಷ್ಟ್ರದ ನ್ಯಾಷನಲ್‌ ಕಮಿಷನ್‌ ಸಿಸ್ಟಮ್ಸ್‌ ಆಫ್‌ ಮೆಡಿಸಿನ್‌ ದರ್ಶನ–ದಿಶೆಗಳೊಂದಿಗೆ ಹೊಂದಿಕೊಂಡಿರುವ ಮಹತ್ವದ ಹೆಜ್ಜೆಯಾಗಿದದೆ ಎಂದು ಡಾ.ವಿದ್ಯಾಪ್ರಭಾ ಆರ್.‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.