ADVERTISEMENT

ಸಮಯಕ್ಕೆ ಸರಿಯಾಗಿ ಸ್ಕಾಲರ್‌ಶಿಪ್‌ ವಿತರಿಸಿ

ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:54 IST
Last Updated 1 ಡಿಸೆಂಬರ್ 2020, 3:54 IST
ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ನೇತೃತ್ವದಲ್ಲಿ ಸೋಮವಾರ ವಿದ್ಯಾರ್ಥಿಗಳು ಮಂಗಳೂರಿನ ಪಾಂಡೇಶ್ವರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ನೇತೃತ್ವದಲ್ಲಿ ಸೋಮವಾರ ವಿದ್ಯಾರ್ಥಿಗಳು ಮಂಗಳೂರಿನ ಪಾಂಡೇಶ್ವರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಮಂಗಳೂರು: ಅಲ್ಪಸಂಖ್ಯಾತ ಇಲಾಖೆಯಲ್ಲಿ ಪ್ರತಿ ವರ್ಷ ಪೋಸ್ಟ್ ಮೆಟ್ರಿಕ್, ಪ್ರಿ ಮೆಟ್ರಿಕ್, ಅರಿವು ಸಾಲ ಯೋಜನೆಯಡಿ ನೀಡಲಾಗುವ ಸ್ಕಾಲರ್‌ಶಿಪ್ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸಮರ್ಪಕವಾಗಿ ಜಮೆಯಾಗುತ್ತಿಲ್ಲ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸೋಮವಾರ ಪಾಂಡೇಶ್ವರದ ಅಲ್ಪಸಂಖ್ಯಾತ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಯೋಜನೆಗಳಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸರಿಯಾಗಿ ಸಿಗುತ್ತಿಲ್ಲ. ಶೇ 50 ರಷ್ಟು ಅರ್ಜಿಗಳಲ್ಲಿ ಇನ್ನೂ ಹಣ ವರ್ಗಾವಣೆಯಾಗಿಲ್ಲ. ಪ್ರತಿ ವರ್ಷ ಇದು ಪುನರಾವರ್ತನೆಯಾಗುತ್ತಿದೆ. ಕಚೇರಿಗೆ ಹೋಗಿ ವಿಚಾರಿಸಿದರೆ, ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಇಂದು ಬರುತ್ತದೆ, ನಾಳೆ ಬರುತ್ತದೆ, ಬ್ಯಾಂಕ್ ಸಮಸ್ಯೆ ಎಂದೆಲ್ಲಾ ಉತ್ತರಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕೊರೊನಾದಿಂದಾಗಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆಯಲ್ಲಿದ್ದಾರೆ. ಶಾಲಾ– ಕಾಲೇಜುಗಳು ಆನ್‌ಲೈನ್ ತರಗತಿಯ ನೆಪದಲ್ಲಿ ಶುಲ್ಕ ಕೇಳುತ್ತಿವೆ. ಆದರೆ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗಾಗಿ ಕಾಯುತ್ತಿದ್ದು, ಅದೂ ಮಂಜೂರಾಗುತ್ತಿಲ್ಲ ಎಂದು ದೂರಿದರು.

ADVERTISEMENT

ಪಿಎಚ್‌ಡಿ ಮತ್ತು ಎಂಫಿಲ್‌ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾಸಿಕ 25ಸಾವಿರ ಫೆಲೋಶಿಪ್ ದೊರೆಯುತ್ತಿತ್ತು. ವಾರ್ಷಿಕವಾಗಿ ₹10ಸಾವಿರ ನಿರ್ವಹಣಾ ವೆಚ್ಚಕ್ಕಾಗಿ ದೊರೆಯುತ್ತಿತ್ತು. ಇವೆಲ್ಲವನ್ನೂ ಏಕಾಏಕಿ ಕಡಿತಗೊಳಿಸಲಾಗಿದೆ. ಮಾಸಿಕ ₹25ಸಾವಿರ ಫೆಲೋಶಿಪ್ ಅನ್ನು ₹10ಸಾವಿರಕ್ಕೆ ಇಳಿಸಿದ್ದಾರೆ ಎಂದು ತಿಳಿಸಿದರು.

ಸ್ಕಾಲರ್‌ಶಿಪ್ ವಿತರಣೆಯ ಸಂದರ್ಭದಲ್ಲಿ ಪ್ರತಿ ಬಾರಿ ತಾಂತ್ರಿಕ ತೊಂದರೆಗಳು ಬರುವುದರಿಂದ ಪ್ರಕ್ರಿಯೆಯನ್ನು ಸರಳೀಕರಿಸಬೇಕು. ಬಾಕಿಯಿರುವ ಸ್ಕಾಲರ್‌ಶಿಪ್‌ ಅನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಉಳಿದಿರುವ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಎಂಫಿಲ್‌ಗೆ ಇರುವ ಫೆಲೋಶಿಪ್ ಕಡಿತಗೊಳಿಸದೇ ಯಥಾಸ್ಥಿತಿ ಕಾಪಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.