ADVERTISEMENT

ಅಖಂಡತೆ ಸುಭಾಷ್‌ಚಂದ್ರ ಬೋಸ್‌ ಕನಸು: ಸುಮಂತ್ರ ಬೋಸ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 5:20 IST
Last Updated 1 ಸೆಪ್ಟೆಂಬರ್ 2025, 5:20 IST
ಸುಭಾಷ್ ಚಂದ್ರ ಬೋಸ್ ಅವರ ಕೃತಿಗಳ ಅನುವಾದಿತ ಪುಸ್ತಕಗಳನ್ನು ಸಚಿವ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದರು. ಕಲ್ಲೂರು ನಾಗೇಶ್‌, ನಾರಾಯಣ ಯಾಜಿ. ಎಂ. ರಾಜಕುಮಾರ್‌, ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌, ಪ್ರೊ.ಪಿ.ಎಲ್ ಧರ್ಮ, ಸುಮಂತ್ರ ಬೋಸ್‌, ಕೆ.ಇ ರಾಧಾಕೃಷ್ಣ ಪಾಲ್ಗೊಂಡಿದ್ದರು
ಸುಭಾಷ್ ಚಂದ್ರ ಬೋಸ್ ಅವರ ಕೃತಿಗಳ ಅನುವಾದಿತ ಪುಸ್ತಕಗಳನ್ನು ಸಚಿವ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದರು. ಕಲ್ಲೂರು ನಾಗೇಶ್‌, ನಾರಾಯಣ ಯಾಜಿ. ಎಂ. ರಾಜಕುಮಾರ್‌, ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌, ಪ್ರೊ.ಪಿ.ಎಲ್ ಧರ್ಮ, ಸುಮಂತ್ರ ಬೋಸ್‌, ಕೆ.ಇ ರಾಧಾಕೃಷ್ಣ ಪಾಲ್ಗೊಂಡಿದ್ದರು   

ಮಂಗಳೂರು: ಅಭಿವೃದ್ಧಿಗೆ ಸಂಬಂಧಿಸಿ ವಿವಿಧ ಆಯಾಮಗಳ ಪರಿಕಲ್ಪನೆಯನ್ನು ಹೊಂದಿದ್ದ ಸುಭಾಷ್‌ಚಂದ್ರ ಬೋಸ್ ಅವರು ಅದಕ್ಕಾಗಿ ಭಾರತದ ಮರುನಿರ್ಮಾಣ ಮತ್ತು ಅಖಂಡತೆಯ ಕನಸು ಕಂಡಿದ್ದರು ಎಂದು ಕೋಲ್ಕತ್ತದ ನೇತಾಜಿ ಸುಭಾಷ್‌ ಚಂದ್ರ ಬೋಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಸುಮಂತ್ರ ಬೋಸ್ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಇಂಗ್ಲಿಷ್ ಕೃತಿಗಳ ಕನ್ನಡಾನುವಾದದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನೇತಾಜಿ ಅವರ ಬಗ್ಗೆ ತಿಳಿದುಕೊಳ್ಳುವ ಸಂದರ್ಭದಲ್ಲಿ ಅವರ ದೃಷ್ಟಿಕೋನದ ಬಗ್ಗೆಯೂ ಅರಿಯಬೇಕು. ಭಾರತದ ಸ್ವಾತಂತ್ರ್ಯವೇ ಅವರ ಗುರಿಯಾಗಿತ್ತು. ದೇಶದಾದ್ಯಂತ ಅವರ ಮೇಲೆ ಅಭಿಮಾನದ ಹೊಳೆ ಈಗಲೂ ಹರಿಯುತ್ತಿದ್ದು ಜಾತಿ, ಧರ್ಮದ ಬೇಧ ಮರೆತು ಜನರು ಅವರನ್ನು ಗೌರವಿಸುತ್ತಿದ್ದಾರೆ. ಹೀಗಾಗಿ ಅವರು ಭಾರತದ ಪರಿಶುದ್ಧತೆಯ ಸಂಕೇತವೂ ಆಗಿದ್ದಾರೆ ಎಂದು ಸುಮಂತ್ರ ಹೇಳಿದರು.

ADVERTISEMENT

ಯೋಜನಾ ಬದ್ಧ ಅಭಿವೃದ್ಧಿಯ ಕನಸು ಕಂಡಿದ್ದರು. ಮಹಿಳೆ ಮತ್ತು ಪುರುಷರ ನಡುವಿನ ಸಮಾನತೆ ಅವರ ಆಶಯಗಳಲ್ಲಿ ಪ್ರಮುಖವಾಗಿತ್ತು. ಆ ಮೂಲಕವೇ ವಸಾಹತುಶಾಹಿತ್ವಕ್ಕೆ ಪಾಠ ಕಲಿಸಲು ಮುಂದಾಗಿದ್ದರು. ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಮಹಿಳಾ ಬೆಟಾಲಿಯನ್ ಆರಂಭಿಸಿದ್ದರ ಹಿಂದಿನ ಉದ್ದೇಶವೂ ಇದೇ ಆಗಿತ್ತು. ಮಹಿಳೆ ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ನಂಬಿದ್ದ ಅವರ ಆ ಮೂಲಕ ಕ್ರಾಂತಿ ಮಾಡಬಹುದು ಎಂದು ತಿಳಿದಿದ್ದರು. ಒಗ್ಗೂಡಿಸುವಿಕೆಯ ಬಹುದೊಡ್ಡ ಮುಂದಾಳು ಆಗಿದ್ದ ಬೋಸ್ ಅವರು ಎಲ್ಲ ಬೇಧವನ್ನು ಮರೆಯಲು ಒಗ್ಗಟ್ಟೊಂದೇ ಮಂತ್ರ ಎಂದು ನಂಬಿದ್ದರು ಎಂದು ಸುಮಂತ್ರ  ಹೇಳಿದರು. 

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ನೇತಾಜಿ ಸುಭಾಷ್‌ ಚಂದ್ರ ಬೋಸ್ ಒಳ್ಳೆಯ ದೇಶಭಕ್ತರಾಗಿದ್ದರು.‌ ಅವರು ಎಲ್ಲ ಸಮುದಾಯದ ನಾಯಕ. ದೇಶ ವಿಭಜನೆ ಮಾಡುವ ಅನೇಕ ಶಕ್ತಿಗಳು ಈಗ ಇದ್ದು ಅಂಥವರಿಗೆ ಸುಭಾಷ್ ಚಂದ್ರ ಬೋಸ್ ಅವರ ಜೀವನವೇ ಪಾಠ ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಸಮಾರಮಭದ ಅಧ್ಯಕ್ಷತೆ ವಹಿಸಿದ್ದರು.

ಅನುವಾದಕ ಕೆ.ಇ. ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾಂಸ ನಾರಾಯಣ ಯಾಜಿ ಕೃತಿಗಳನ್ನು ಪರಿಚಯಿಸಿದರು. ಬೆಂಗಳೂರಿನ ನೇತಾಜಿ ಸುಭಾಷ್‌ ಚಂದ್ರ ಬೋಸ್ ಟ್ರಸ್ಟ್‌ ಅಧ್ಯಕ್ಷ ಎಂ.ರಾಜಕುಮಾರ್‌, ಬಿಜೆಪಿ ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರಕಾಶಕ ಶೇಖರ್ ರೆಡ್ಡಿ, ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಕಲ್ಲೂರು ನಾಗೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.