ಸುಬ್ರಹ್ಮಣ್ಯ: ಇಲ್ಲಿನ ಕೊಲ್ಲಮೊಗ್ರು, ಹರಿಹರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಡಿನೊಳಗೆ ಬದುಕು ಕಟ್ಟಿಕೊಂಡವರದ್ದು ಹಲವು ಪಾಡು. ತಾಲೂಕು ಕೇಂದ್ರ ಸುಳ್ಯದಿಂದ 40 ಕಿಲೊ ಮೀಟರ್ ದೂರದಲ್ಲಿರುವ ಕಲ್ಮಕಾರು, ಕೊಲ್ಲಮೊಗ್ರು ಹರಿಹರ, ಬಾಳುಗೋಡು, ಉಪ್ಪುಕಳ ಭಾಗದ ಜನರ ಸಮಸ್ಯೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನದ ಫಲವಾಗಿ ಪತ್ರಕರ್ತರು, ಮಂತ್ರಿಗಳ, ಶಾಸಕರು ಮತ್ತು ಅಧಿಕಾರಿಗಳ ಗ್ರಾಮ ವಾಸ್ತವ್ಯ ಇದೇ 9ರಂದು ನಡೆಯಲಿದೆ.
ಗಡಿ ಗ್ರಾಮಗಳಾದ ಕೊಲ್ಲಮೊಗ್ರ, ಹರಿಹರದ ಜನರು 2018 ಮತ್ತು 2022ರ ಮಳೆಗಾಲ ಮರೆಯಲು ಸಾಧ್ಯವಿಲ್ಲ. ಅಂದಿನ ಮಹಾಮಳೆ ಈ ಗ್ರಾಮಗಳ ಬದುಕನ್ನೇ ನುಚ್ಚುನೂರು ಮಾಡಿತು. ಸಂಪರ್ಕ ರಸ್ತೆ, ಸೇತುವೆ, ಕಾಲುಸಂಕಗಳು ಕೊಚ್ಚಿ ಹೋಗಿದ್ದವು. ಅವೆಲ್ಲ ತಾತ್ಕಾಲಿಕವಾಗಿ ದುರಸ್ತಿಗೊಂಡರೂ ಶಾಶ್ವತ ಪರಿಹಾರ ಆಗಲಿಲ್ಲ.
ಮಳೆಯಿಂದ ಸಂಚಾರಕ್ಕೆ ಹೊಡೆತ ಬಿದ್ದಿದೆ. ಇಲ್ಲಿ ಶಾಶ್ವತ ಅಭಿವೃದ್ಧಿ ಕೆಲಸ ಆಗಬೇಕು ಎಂದು ಹೇಳುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮಾಧವ ಚಾಂತಾಳ ಗ್ರಾಮದ ಉದಯ ಶಿವಾಲ.
ಗಾಳಿಬೀಡು-ಕಡಮಕಲ್-ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿ ಮಾಡಬೇಕು ಎಂಬುದು ಹರಿಹರ, ಕೊಲ್ಲಮೊಗ್ರ ಗ್ರಾಮಗಳ ಜನರ ದಶಕಗಳ ಬೇಡಿಕೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ರಸ್ತೆ ಅಸ್ತಿತ್ವದಲ್ಲಿದ್ದರೂ ಅರಣ್ಯದೊಳಗೆ ಹಾದು ಹೋಗುವ ಕಾರಣ ಸುಮಾರು 6 ಕಿ.ಮಿ.ರಸ್ತೆಯ ಅಭಿವೃದ್ಧಿ ಕನಸು ನನಸಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.