ADVERTISEMENT

ಸುರತ್ಕಲ್ | ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ, ಕೊಲೆ: ಆರೋಪಿಗೆ ಗಲ್ಲು

ಜೋಕಟ್ಟೆ: ಶಿಕ್ಷಣಕ್ಕಾಗಿ ಬೆಳಗಾವಿಯಿಂದ ಬಂದಿದ್ದ ಬಾಲಕಿ; ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿದ ಆರೋಪಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:42 IST
Last Updated 13 ಸೆಪ್ಟೆಂಬರ್ 2025, 6:42 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಮಂಗಳೂರು: ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ ಎಫ್‌ಟಿಎಸ್‌ಸಿ–2 (ಪೋಕ್ಸೊ) ಮರಣದಂಡನೆ ವಿಧಿಸಿದೆ.

ಬೆಳವಾಗಿ ಜಿಲ್ಲೆ ಸವದತ್ತಿ ತಾಲ್ಲೂಕು ಹಂಚಿನಾಳ ಗ್ರಾಮದ ಫಕೀರಪ್ಪ ಹಣಮಪ್ಪ ಮಾದರ (58) ಶಿಕ್ಷೆಗೆ ಒಳಗಾದವ. ಇಲ್ಲಿನ ವಸತಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸುರತ್ಕಲ್ ಸಮೀಪದ ಚಿಕ್ಕಪ್ಪನ ಬಾಡಿಗೆ ಮನೆಗೆ ತೆರಳಿದ್ದಳು. 2024ರ ಆಗಸ್ಟ್‌ 6ರಂದು ಚಿಕ್ಕಪ್ಪ ಮತ್ತು ಚಿಕ್ಕಮ್ಮ ಹೊರಗೆ ಹೋಗಿದ್ದಾಗ, ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ಫಕೀರಪ್ಪ ಅಕ್ರಮವಾಗಿ ಮನೆಗೆ ಪ್ರವೇಶಿಸಿ ದೌರ್ಜನ್ಯ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.

ADVERTISEMENT

ಈ ಸಂಬಂಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎಸ್‌ ಮಾನು ಅವರು ಅಪರಾಧ ಸಾಬೀತಾದ ಕಾರಣ ಶಿಕ್ಷೆ ಪ್ರಕಟಿಸಿದರು. ಭಾರತೀಯ ನ್ಯಾಯಸಂಹಿತೆಯ (ಬಿಎನ್‌ಎಸ್‌) ಕಲಂ 103(1)ರ ಪ್ರಕಾರ ಕೊಲೆ ಪ್ರಕರಣದಲ್ಲಿ ಆತನಿಗೆ ಮರಣದಂಡನೆಯಾಗಿದ್ದು ಪೋಕ್ಸೊ ಕಾಯ್ದೆಯ ಕಲಂ 4(2)ರಲ್ಲಿ ಜೀವಾವಧಿ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಲಾಗಿದೆ. ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿದ್ದಕ್ಕೆ ಬಿಎನ್‌ಎಸ್‌ನ ಕಲಂ 332 (ಎ) ಪ್ರಕಾರ ಜೀವಾವಧಿ ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಲಾಗಿದೆ.

ಕೊಲೆಯಾದ ಬಾಲಕಿಯ ಪೋಷಕರಿಗೆ ₹1 ಲಕ್ಷ ಪಾವತಿಸುವಂತೆಯೂ ಆದೇಶಿಸಿದ್ದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ₹ 4 ಲಕ್ಷ ಪರಿಹಾರ ನೀಡಬೇಕು ಎಂದೂ ಸೂಚಿಸಲಾಗಿದೆ. ಪಣಂಬೂರು ಠಾಣೆಯ ಇನ್‌ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್ ದೋಷಾರೋಪ ಪತ್ರ ಸಲ್ಲಿಸಿದ್ದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಹನಾ ದೇವಿ ಬೋಳೂರು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.