ಸುರತ್ಕಲ್: ಎಚ್ಪಿಸಿಎಲ್ ಘಟಕದಲ್ಲಿ ಕೆಲಸ ಮಾಡಲು ಬೇರೆ ಕಡೆಯ ಕಾರ್ಮಿಕರನ್ನು ಕರೆತಂದಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಬುಧವಾರ ಧಿಡೀರ್ ಪ್ರತಿಭಟನೆ ನಡೆಸಿದರು.
25 ವರ್ಷಗಳಿಂದ ಅಡುಗೆ ಅನಿಲ ಜಾಡಿ ತುಂಬಿಸುವ ಘಟಕದಲ್ಲಿ ಸ್ಥಳೀಯ ಕಾರ್ಮಿಕರು ದುಡಿಯುತ್ತಿದ್ದಾರೆ. ಈಗ ಯಾವ ಮುನ್ಸೂಚನೆಯನ್ನೂ ನೀಡದೆ ಹೊಸಬರನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾನಿರತ ಕಾರ್ಮಿಕರಿಗೆ ಇತರ ಸೇವೆ ನಿರ್ವಹಿಸುವ ಕಾರ್ಮಿಕರು ಕೂಡ ಬೆಂಬಲ ನೀಡಿದರು. ಇದರಿಂದ ಅನಿಲ ಜಾಡಿ ಸರಬರಾಜು ಸ್ಥಗಿತಗೊಂಡಿತು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮಂಗಳೂರು ಉತ್ತರ ಶಾಸಕ ಭರತ್ ವೈ ಶೆಟ್ಟಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸ್ಥಳೀಯರನ್ನೇ ಮುಂದುವರಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾತುಕತೆ ನಡೆಸಿದರು.
ಸ್ಥಳೀಯರನ್ನು ಕಡೆಗಣಿಸಬಾರದು, ತುಂಡು ಗುತ್ತಿಗೆ ಕೊಡುವ ಮೂಲಕ ಕಾರ್ಮಿಕರ ಸಂಖ್ಯೆ ಕಡಿತಗೊಳಿಸಲು ಪ್ರಯತ್ನಿಸಬಾರದು, ಕಾರ್ಮಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು. ಶೀಗ್ರದಲ್ಲೇ ಪ್ರಮುಖ ಕಂಪನಿಗಳ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಲು ನಿರ್ಧರಿಸಲಾಯಿತು. ಸ್ಥಳೀಯರನ್ನು ಕಡೆಗಣಿಸಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆಯಲಾಯಿತು.
ಮಹಾನಗರಪಾಲಿಕೆ ಸದಸ್ಯರಾದ ವರುಟ್ ಚೌಟ, ಲೋಕೇಶ್ ಬೊಳ್ಳಾಜೆ, ಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಜೋಗಿ,ಸದಸ್ಯ ಪದ್ಮನಾಭ ಸಾಲ್ಯಾನ್, ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ, ಸುರತ್ಕಲ್ ಪೋಲೀಸ್ ಠಾಣಾ ಉಪಠಾಣಾಧಿಕಾರಿ ರಘನಾಯಕ್,ಬಿಜೆಪಿ ಮುಖಂಡರಾದ ಭರತ್ ರಾಜ್ ಕೃಷ್ಣಾಪುರ, ಭಾಸ್ಕರ್ ರಾವ್ ಬಾಳ, ಶಿವಪ್ರಸಾದ್ ಶೆಟ್ಟಿ ಕಿರಣ್ ರೈ ಬಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.