ADVERTISEMENT

ಡಾ.ಸುರೇಶ್ ರಾವ್‌ಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 14:18 IST
Last Updated 31 ಅಕ್ಟೋಬರ್ 2021, 14:18 IST
ಡಾ.ಸುರೇಶ್ ರಾವ್‌
ಡಾ.ಸುರೇಶ್ ರಾವ್‌    

ಮಂಗಳೂರು: ‘ಕಟೀಲಿನಂತಹ ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಡಿಎಸ್‌ಎಂ (ದುರ್ಗಾ ಸಂಜೀವಿನಿ ಮಣಿಪಾಲ) ಆಸ್ಪತ್ರೆ ನಿರ್ಮಿಸಿರುವುದಕ್ಕೆ ಸರ್ಕಾರ ನನ್ನನ್ನು ಗುರುತಿಸಿರಬಹುದು. ಆದರೆ, ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಸ್ಥಳದ ಕೃಪೆ’ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಡಾ.ಸುರೇಶ್ ರಾವ್‌ ಧನ್ಯತೆಯಿಂದ ಪ್ರತಿಕ್ರಿಯಿಸಿದರು.

1953ರಲ್ಲಿ ಕಟೀಲಿನ ಕಾರ್ತ್ಯಾಯಿನಿ ಹಾಗೂ ಸಂಜೀವ ರಾವ್ ಪುತ್ರರಾಗಿ ಜನಿಸಿದ ಸುರೇಶ್‌ ರಾವ್, ಕಟೀಲು ಹೈಸ್ಕೂಲಿನಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದರು. 1969ರಲ್ಲಿ ಮುಂಬೈಗೆ ತೆರಳಿದ್ದ ಅವರು, ಅಲ್ಲಿ ಶಿಕ್ಷಣವನ್ನು ಮುಂದುವರಿಸಿದರು. ಎಂಬಿಬಿಎಸ್, ಎಂ.ಎಸ್‌(ಜನರಲ್ ಸರ್ಜರಿ) ಪಡೆದರು.

ಮುಂಬೈಯಲ್ಲಿ 1988ರಲ್ಲಿ ಸಂಜೀವಿನಿ ಆಸ್ಪತ್ರೆಯನ್ನು ಆರಂಭಿಸುವ ಮೂಲಕ ವೈದ್ಯಕೀಯ ಸೇವೆ ವ್ಯಾಪ್ತಿಯನ್ನು ವಿಸ್ತರಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಕೃತಿಗಳನ್ನು ಬರೆದಿದ್ದಾರೆ. ವಿವಿಧ ವೈದ್ಯಕೀಯ ಸಂಸ್ಥೆ– ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

ADVERTISEMENT

ಮುಂಬೈಯಲ್ಲಿ ನೆಲೆಸಿದರೂ, ಹುಟ್ಟೂರಿನ ನಂಟು ಬಿಡದ ಡಾ.ಸುರೇಶ್ ರಾವ್, ಕಟೀಲಿನಲ್ಲಿ ಸಂಸ್ಕೃತ ಅಧ್ಯಯನ, ಸಂಸ್ಕಾರಗಳ ತರಬೇತಿ ಮತ್ತಿತರ ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ಈಚೆಗೆ ಡಿಎಸ್‌ಎಂ ಆಸ್ಪತ್ರೆ ಮೂಲಕ ಗ್ರಾಮೀಣ ಕ್ಷೇತ್ರದಲ್ಲೂ ಆರೋಗ್ಯ ಸೇವೆ ಕಲ್ಪಿಸುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ. ಪತ್ನಿ ವಿಜಯ ಲಕ್ಷ್ಮೀ, ಪುತ್ರಿಯರಾದ ಪಲ್ಲವಿ ಮತ್ತು ಶ್ರುತಿ ಅವರ ಕುಟುಂಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.