ADVERTISEMENT

ಡೆಲ್ಟಾ ಪ್ಲಸ್ ಆತಂಕ: ತಲಪಾಡಿಯಲ್ಲಿ ತೀವ್ರಗೊಂಡ ತಪಾಸಣೆ

ಸ್ಥಳದಲ್ಲೇ ಕೋವಿಡ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:19 IST
Last Updated 2 ಜುಲೈ 2021, 14:19 IST
ಚಿತ್ರ: 2ಯುಎಲ್ 2: ಗಡಿಭಾಗ ತಲಪಾಡಿಯಲ್ಲಿ  ಶುಕ್ರವಾರ ತಪಾಸಣೆಯನ್ನು ತೀವ್ರಗೊಳಿಸಲಾಯಿತು. 
ಚಿತ್ರ: 2ಯುಎಲ್ 2: ಗಡಿಭಾಗ ತಲಪಾಡಿಯಲ್ಲಿ  ಶುಕ್ರವಾರ ತಪಾಸಣೆಯನ್ನು ತೀವ್ರಗೊಳಿಸಲಾಯಿತು.    

ಉಳ್ಳಾಲ: ಡೆಲ್ಟಾ ಪ್ಲಸ್ ಆತಂಕ ಹಿನ್ನೆಲೆಯಲ್ಲಿ ಕರ್ನಾಟಕ- ಕೇರಳಯ ತಲಪಾಡಿ ಗಡಿಯಲ್ಲಿ ಪೊಲೀಸರು ತಪಾಸಣೆಯನ್ನು ಶುಕ್ರವಾರದಿಂದ ತೀವ್ರಗೊಳಿಸಿದ್ದಾರೆ. ಕೇರಳದಿಂದ ಬರುವ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಿದರು.

ಈ ಕಾರಣದಿಂದಾಗಿ ಶುಕ್ರವಾರ ತಲಪಾಡಿ ಗಡಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿತ್ತು. 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಗಡಿಯಲ್ಲೇ ರ‍್ಯಾಂಡಂ ಪರೀಕ್ಷೆ ನಡೆಸಲಾಯಿತು.

ನಿತ್ಯ ಉದ್ಯೋಗ, ವ್ಯವಹಾರಕ್ಕೆ ಬರುವವರಿಗೆ ಶುಕ್ರವಾರದಿಂದ 15 ದಿನಗಳಿಗೊಮ್ಮೆ ವರದಿ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಬೆಳಿಗ್ಗೆ ಬೈಕ್ ಮತ್ತು ಕಾರುಗಳನ್ನು ಪೊಲೀಸರು ತೀವ್ರ ತಪಾಸಣೆಗೊಳಪಡಿಸಿದರು. ಟೆಸ್ಟ್ ಮಾಡಿಸಿದ ಬಳಿಕವೇ ಎಲ್ಲರನ್ನು ಮಂಗಳೂರಿನತ್ತ ಹೋಗಲು ಅವಕಾಶ ಕಲ್ಪಿಸಲಾಯಿತು.

ADVERTISEMENT

ಕೇರಳದ ಖಾಸಗಿ ಮತ್ತು ಸರ್ಕಾರಿ ಬಸ್‌ಗಳಿಗೆ ಮುಕ್ತ ಪ್ರವೇಶ: ಗಡಿಯಲ್ಲಿ ನಿಯಮ ಕಟ್ಟುನಿಟ್ಟಾಗಿದ್ದರೂ ಬಸ್ಸುಗಳಿಗೆ ತಪಾಸಣೆ ನಡೆಸಲಾಗಿಲ್ಲ. ಕೇರಳದಿಂದ ಬರುವ ಬಸ್ಸುಗಳು ಗಡಿಯಲ್ಲಿ ಕೇರಳದ ಪ್ರಯಾಣಿಕರನ್ನು ಇಳಿಸಿ ವಾಪಸಾಗುತ್ತಿದೆ. ಕೇರಳದಿಂದ ಬಸ್‌ ಇಳಿದ ಪ್ರಯಾಣಿಕರನ್ನು ಮಂಗಳೂರಿನ ಖಾಸಗಿ ಬಸ್‌ಗಳು ಮತ್ತು ಕರ್ನಾಟಕ ಸಾರಿಗೆ ಬಸ್‌ಗಳು ಹತ್ತಿಸಿಕೊಂಡು ಮಂಗಳೂರಿಗೆ ಬರುತ್ತಿದೆ. ಬಸ್‌ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದರೂ ತಪಾಸಣೆ ನಡೆಸಲಾಗುತ್ತಿಲ್ಲ. ನಿರ್ವಾಹಕರು ಕೂಡ ಪ್ರಯಾಣಿಕರಲ್ಲಿ ಯಾವುದೇ ವರದಿಯನ್ನು ಕೇಳುತ್ತಿಲ್ಲ ಅನ್ನುವ ಆರೋಪಗಳು ಜನರಿಂದ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.