ADVERTISEMENT

ಮೂಡುಬಿದಿರೆ | ದೇವಾಲಯಗಳಿಂದ ಭಗವಂತನ ಸಾಮಿಪ್ಯ ಸಾಧ್ಯ: ಪೇಜಾವರ ಸ್ವಾಮೀಜಿ 

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 14:07 IST
Last Updated 7 ಮಾರ್ಚ್ 2025, 14:07 IST
ಮೂಡುಬಿದಿರೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠದ ಸ್ವಾಮೀಜಿ ಮಾತನಾಡಿದರು. ಡಿ.ವೀರೆಂದ್ರ ಹೆಗ್ಗಡೆ, ಕುಲದೀಪ್ ಎಂ, ಎಂ. ಮೋಹನ ಅಳ್ವ ಮತ್ತಿತರರು ಇದ್ದರು
ಮೂಡುಬಿದಿರೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠದ ಸ್ವಾಮೀಜಿ ಮಾತನಾಡಿದರು. ಡಿ.ವೀರೆಂದ್ರ ಹೆಗ್ಗಡೆ, ಕುಲದೀಪ್ ಎಂ, ಎಂ. ಮೋಹನ ಅಳ್ವ ಮತ್ತಿತರರು ಇದ್ದರು   

ಮೂಡುಬಿದಿರೆ: ‘ಸರ್ವವ್ಯಾಪಿಯಾಗಿರುವ ದೇವರನ್ನು ನೇರವಾಗಿ ಕಾಣಲು  ಸಾಧ್ಯವಿಲ್ಲ. ದೇವಾಲಯ, ಧಾರ್ಮಿಕ ಕೇಂದ್ರಗಳ ಮೂಲಕ ದೇವರ ಸಾಮಿಪ್ಯ ಯ ಸಿಗುತ್ತದೆ. ಇದರಿಂದ ನಾವು ಪುನೀತರಾಗಬಹುದು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ‘ತುಳುನಾಡಿನ ವಿವಿಧ ಕಡೆಗಳಲ್ಲಿ ಒಳ್ಳೆಯ ರೀತಿಯಲ್ಲಿ ಕ್ಷೇತ್ರಗಳ ಅಭಿವೃದ್ಧಿಯಾಗುತ್ತಿದೆ. ಭಕ್ತರು ಅಂತರಂಗ ಹಾಗೂ ಬಹಿರಂಗ ಶುದ್ಧಿಯೊಂದಿಗೆ ದೇವಾಲಗಳಲ್ಲಿ ಪ್ರಾರ್ಥನೆ ಮಾಡಬೇಕು. ಸಂಕಲ್ಪದಿಂದ ಸಾಧನೆ ಸಾಧ್ಯ’ ಎಂದರು.

ADVERTISEMENT

ವಾಸ್ತು ತಜ್ಞ ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ‘ಭಗಂವತನ ವಿರಾಟ್ ಸ್ವರೂಪ ಶಿವಲಿಂಗ. ನಮಗೆ ಸಂತೃಪ್ತಿ ಸಿಗಬೇಕಾದರೆ ಶಾಂತ ಸ್ವರೂಪ ಶಿವನನ್ನು ಪೂಜಿಸಬೇಕು ಎಂದರು. ಜನರೇ ಸೇರಿ ನಿರ್ಮಿಸಿದ ದೇವಾಲಯ ಇದು’ ಎಂದು ಹೇಳಿದರು. 

ಶಾಸಕ ಉಮಾನಾಥ ಕೋಟ್ಯಾನ್  ಮಾತನಾಡಿ, ₹2 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಎದುರು ಸೇತುವೆ ನಿರ್ಮಾಣಗೊಂಡಿದೆ. ಸಂಪಿಗೆಯಿಂದ ಪುತ್ತಿಗೆ ದೇವಾಲಯದ ಮುಂಭಾಗವಾಗಿ ಒಂಟಿಕಟ್ಟೆ ರಸ್ತೆ ಅಗಲೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದರು.

ದೇವಳ ಬಳಿ ಇರುವ 60 ಸೆಂಟ್ಸ್ ಜಾಗವನ್ನು ಮಡ್ಮಣ್ಣಾಯ ಟ್ರಸ್ಟ್ ವತಿಯಿಂದ ನೀಡಿದ ಭೂದಾನದ ಪತ್ರವನ್ನು ಉದ್ಯಮಿ ರಾಮದಾಸ್ ಮಡ್ಮಣ್ಣಾಯ ಕುಂಗೂರು ಅವರು ದೇವಳ ಆನುವಂಶಿಕ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಲದೀಪ ಎಂ. ಅವರಿಗೆ ಹಸ್ತಾಂತರಿಸಿದರು. 

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ ಮೋಹನ ಆಳ್ವ, ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಅದಾನಿ ಗ್ರೂಪ್ನ ಕಿಶೋರ್ ಆಳ್ವ, ಪಾಂಡುರಂಗ ಕಾಮತ್ ಪ್ರಶಾಂತ ವಾಟಿಕ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಕೆ.ಶ್ರೀಪತಿ ಭಟ್, ಸುಧಾಕರ ಶೆಟ್ಟಿ, ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ಕಾನೂನು ಸಲಹೆಗಾರ ಪ್ರಕಾಶ್ ಶೆಟ್ಟಿ, ದಯಾನಂದ ಶೆಟ್ಟಿ ಕಟ್ಟಣಿಗೆ ಪುತ್ತಿಗೆ, ಶಾರದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಪಿ ಪುರಾಣಿಕ್, ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ ಜಿಲ್ಲೆ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು.  ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.