ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ₹51.72 ಕೋಟಿ ವಿನಿಯೋಗ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 20:29 IST
Last Updated 12 ಅಕ್ಟೋಬರ್ 2023, 20:29 IST
ಧರ್ಮಸ್ಥಳ
ಧರ್ಮಸ್ಥಳ   

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 2023-24ರ ಸಾಲಿಗೆ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₹51.72 ಕೋಟಿ ಅನುದಾನ ವಿನಿಯೋಗಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.

ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ಹೈನೋದ್ಯಮ ಬಲವರ್ಧನೆಗೆ ಒತ್ತು ನೀಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಹೈನುಗಾರಿಕೆಯೊಂದಿಗೆ ಸಾವಯವ ಕೃಷಿ, ನೀರಾವರಿ, ಸಮಗ್ರ ತೋಟಗಾರಿಗೆ, ಕೃಷಿ ಸ್ವ-ಉದ್ಯೋಗ, ಭತ್ತ ಯಾಂತ್ರೀಕರಣ, ಸಿರಿಧಾನ್ಯ ಬೇಸಾಯ, ನರ್ಸರಿ ರಚನೆ, ಜಲಾನಯನ ಮಾದರಿಗಳು, ಪರಿಸರ ಮಾಹಿತಿ ಜಾಗೃತಿ ಶಿಬಿರ, ಶಾಲಾ ಪರಿಸರ ಜಾಗೃತಿ ಮಾಹಿತಿ ಶಿಬಿರಗಳನ್ನು ಆಯೋಜಿಸಲು ಕಾರ್ಯಯೋಜನೆ ರೂಪಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಇದೇ 14ರಂದು ಸಂಜೆ 4.30ಕ್ಕೆ ಧರ್ಮಸ್ಥಳದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಚಾಲನೆ ನೀಡುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್‌, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೃಷಿ ಇಲಾಖಾ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅವರು ಹೇಳಿದ್ದಾರೆ.

ADVERTISEMENT

ರಾಜ್ಯದಲ್ಲಿ ಸುಮಾರು 2 ಲಕ್ಷ ರೈತರ ಪ್ರಗತಿಬಂಧು ಜಂಟಿ ಬಾಧ್ಯತಾ ಗುಂಪುಗಳಲ್ಲಿ ಸುಮಾರು 8 ಲಕ್ಷ ರೈತರು ಯೋಜನೆಯ ಕಾರ್ಯಕ್ರಮಗಳ ಪ್ರಯೋಜನ ಪ್ರತಿವರ್ಷ ಪಡೆದುಕೊಳ್ಳುತ್ತಾರೆ. ಈ ವರ್ಷ 10 ಲಕ್ಷ ರೈತರು ಪ್ರಯೋಜನ ಪಡೆಯಲಿದ್ದಾರೆ. ಕ್ಷೀಣಿಸುತ್ತಿರುವ ಭತ್ತ ಬೇಸಾಯ ಪ್ರದೇಶವನ್ನು ಪುನಃಶ್ಚೇತನಗೊಳಿಸಲು ಭತ್ತ ಬೇಸಾಯದ ಯಾಂತ್ರೀಕರಣಕ್ಕೆ ಆದ್ಯತೆ ನೀಡಿ ಒಟ್ಟು 50 ಸಾವಿರ ಎಕರೆ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಮಾಡಲಾಗಿದೆ. ಒಟ್ಟು 10 ಸಾವಿರ ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬೆಳೆಯಲು ಪ್ರೇರಣೆ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.