ಮಂಗಳೂರು: ಮನೆಯಿಂದ ಹಣ ಮತ್ತು ಚಿನ್ನ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಮನೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಬ್ಬರಿಗೆ ಮನೆಯವರು ಹಲ್ಲೆ ನಡೆಸಿದ ದೃಶ್ಯವಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ವಿಡಿಯೊದಲ್ಲಿರುವುದು ನಗರದ ಹೊರವಲಯದ ಅರ್ಕುಳದ ಮನೆಯೊಂದರಲ್ಲಿ ನಡೆದ ಘಟನೆಯ ದೃಶ್ಯ ಎಂಬುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ.
‘ಅರ್ಕುಳದ ಮನೆಯೊಂದರಲ್ಲಿ ಬಿಹಾರದ ಇಬ್ಬರು ಕಾರ್ಮಿಕರು ಕೆಲಸಕ್ಕಿದ್ದರು. ಅದೇ ಮನೆಯಿಂದ ₹ 1.5 ಲಕ್ಷ ನಗದು ಹಾಗೂ ಚಿನ್ನಾಭರಣ ಕದ್ದ ಆರೋಪ ಅವರ ಮೇಲಿದೆ. ಅವರ ಬಾಯಿ ಬಿಡಿಸಲು ಮನೆಯವರು ಹಲ್ಲೆ ನಡೆಸಿದ್ದು, ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು’ ಎಂದು ಗೊತ್ತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಅಧಿಕಾರಿಯೊಬ್ಬರು, ‘ ವಿಡಿಯೊವನ್ನು ಗಮನಿಸಿ ಕೂಡಲೇ ವಿಚಾರಣೆ ನಡೆಸಿದ್ದೇವೆ. ಅರ್ಕುಳದ ಮನೆಯೊಂದರಲ್ಲಿ ಕೆಲಸಕ್ಕಿದ್ದ ಬಿಹಾರದ ಯುವಕ ನಗದು ಮತ್ತು ಚಿನ್ನ ಕಳವು ಮಾಡಿದ್ದ. ಅದನ್ನು ಮರಳಿಸುವಂತೆ ಮನೆಯವರು ಹಲ್ಲೆ ನಡೆಸಿದ್ದಾರೆ. ಯುವಕ ನಗದು ಮತ್ತು ಚಿನ್ನ ಮರಳಿಸಿದ್ದಾನೆ. ಆತ ತನ್ನ ಊರಿಗೆ ವಾಪಸಾಗಿದ್ದಾನೆ. ಈ ಬಗ್ಗೆ ಯಾರೂ ದೂರು ನೀಡಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.