ADVERTISEMENT

ಪಣಂಬೂರು: ಮೂವರು ಯುವಕರು ಸಮುದ್ರಪಾಲು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 4:28 IST
Last Updated 4 ಮಾರ್ಚ್ 2024, 4:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸುರತ್ಕಲ್‌: ನಗರದ ಪಣಂಬೂರು ಕಡಲ ಕಿನಾರೆ ಬಳಿ ವಿಹಾರಕ್ಕೆ ತೆರಳಿದ್ದ ಮೂವರು ಯುವಕರು ಭಾನುವಾರ ಸಂಜೆ ಸಮುದ್ರಪಾಲಾಗಿದ್ದಾರೆ.

ಮಿಲನ್‌ (20 ವರ್ಷ), ಲಿಖಿತ್ (18) ಹಾಗೂ ನಾಗರಾಜ (24) ಸಮುದ್ರಪಾಲಾದವರು. ಅವರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಮಿಲನ್‌ ನಗರದಲ್ಲಿ ಮೀಷೊ ಕಂಪನಿಯ ಸರಕು ವಿತರಕನಾಗಿ ದುಡಿಯುತ್ತಿದ್ದರು. ಲಿಖಿತ್‌ ಕೈಕಂಬದ ರೋಸಾ ಮಿಸ್ಟಿಕಾ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ. ನಾಗರಾಜ್‌ ಅವರು ಬೈಕಂಪಾಡಿ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಎಂಎಂಆರ್‌ ಕಂಪನಿಯಲ್ಲಿ ಮೇಲ್ವಿಚಾರಕರಾಗಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದರು.

ಪಣಂಬೂರು ಕಡಲಕಿನಾರೆಯಲ್ಲಿ ಶುಕ್ರವಾರದಿಂದ ಜಾನಪದ ಕಡಲೋತ್ಸವ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಕಿನಾರೆಗೆ ಭೇಟಿ ನೀಡುತ್ತಿದ್ದರು. ಭಾನುವಾರದಂದು ಈ ಉತ್ಸವದ ಕೊನೆಯ ದಿನವಾಗಿತ್ತು. ವಾರಾಂತ್ಯದ ದಿನವಾದ್ದರಿಂದ ಹೆಚ್ಚಿನ ಜನಸಂದಣಿ ಇತ್ತು. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದುದರಿಂದ ಸಾಹಸಿ ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಯುವಕರು ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ವೀಕ್ಷಣಾ ವೇದಿಕೆ ನಿರ್ಮಿಸಿದ್ದ ಸ್ಥಳದಿಂದ ದೂರದಲ್ಲಿ ಸಮುದ್ರಕ್ಕೆ ಇಳಿದು ಈಜಾಡುತ್ತಿದ್ದರು. ಈ ವೇಳೆ ಭಾರಿ ಅಲೆಯೊಂದು ಅವರನ್ನು ಕಡಲ ಒಡಲೊಳಗೆ ಎಳೆದೊಯ್ದಿತ್ತು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಪಣಂಬೂರು ಠಾಣೆಯ ಪೋಲಿಸರು  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮುದ್ರಪಾಲಾದವರ ಶೋಧಕಾರ್ಯ ಮುಂದುವರಿದಿದೆ. ಪಣಂಬೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.