ADVERTISEMENT

ಕಲಾ ಕ್ಷೇತ್ರ ನೆಮ್ಮದಿಯ ತಾಣ: ಅಂಗಾರ

ಕುಕ್ಕೆಯಲ್ಲಿ ‘ಬಿರ್ದ್‌ದ ಕಂಬುಲ’ ತುಳು ಚಲನಚಿತ್ರದ ಹೆಸರು ಅನಾವರಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 3:55 IST
Last Updated 11 ಆಗಸ್ಟ್ 2021, 3:55 IST
‘ಬಿರ್ದದ ಕಂಬುಲ’ ಚಲನಚಿತ್ರದ ಫಲಕವನ್ನು ಸಚಿವ ಎಸ್.ಅಂಗಾರ ಅನಾವರಣಗೊಳಿಸಿದರು.
‘ಬಿರ್ದದ ಕಂಬುಲ’ ಚಲನಚಿತ್ರದ ಫಲಕವನ್ನು ಸಚಿವ ಎಸ್.ಅಂಗಾರ ಅನಾವರಣಗೊಳಿಸಿದರು.   

ಸುಬ್ರಹ್ಮಣ್ಯ: ‘ದೇವರ ಆರಾಧನೆಯಿಂದ ಬದುಕು ಬಂಗಾರವಾಗುತ್ತದೆ. ಬದುಕಿನಲ್ಲಿ ನೆಮ್ಮದಿಯನ್ನು ನಾವೇ ಗಳಿಸಿಕೊಳ್ಳಬೇಕು. ಉತ್ತಮ ಮನಃಸ್ಥಿತಿಯನ್ನು ಹೊಂದುವ ಮೂಲಕ ಜೀವನದಲ್ಲಿ ಸುಖ–ಶಾಂತಿ ದೊರಕುತ್ತದೆ. ಕಲಾಕ್ಷೇತ್ರವು ಬದುಕಿಗೆ ನೆಮ್ಮದಿ ನೀಡುವ ತಾಣ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ತೆರೆಗೆ ಬರಲಿರುವ ‘ಬಿರ್ದ್‌ದ ಕಂಬುಲ’ ಚಲನಚಿತ್ರದ ಹೆಸರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ಮಂಗಳವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ‘ನಮ್ಮ ಸಂಸ್ಕೃತಿ, ಕಲೆ, ಧಾರ್ಮಿಕತೆಯನ್ನು ಎಲ್ಲೆಡೆ ತಲುಪಿಸುವಲ್ಲಿ ಕಲಾರಂಗದ ಪಾತ್ರ ಅನನ್ಯ. ಸಿನಿಮಾ ಕ್ಷೇತ್ರ ರಾಷ್ಟ್ರದ ಸಂಸ್ಕೃತಿಯನ್ನು ಜಗದಗಲಕ್ಕೆ ತಲುಪಿಸಿದೆ. ತುಳುನಾಡು ಶ್ರೀಮಂತವಾದ ಪರಂಪರೆಯನ್ನು ಒಳಗೊಂಡಿದೆ. ತುಳುನಾಡಿನ ಸಂಸ್ಕೃತಿಯ ಕೊಡುಗೆಯಾದ ಕಂಬಳವು ಸಹಸ್ರಾರು ವರ್ಷ ಇತಿಹಾಸವನ್ನು ಹೊಂದಿದೆ. ಇಂತಹ ಸಾಂಸ್ಕೃತಿಕ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ನಿರ್ಮಿಸುವ ಮೂಲಕ ತುಳು ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಲು ಹೊರಟಿರುವುದು ಶ್ಲಾಘನೀಯ’ ಎಂದರು.

ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶ್ರೀವತ್ಸ, ಶೋಭಾ ಗಿರಿಧರ್, ಮಾಸ್ಟರ್‌ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ್ ಮರ್ದಾಳ, ಮನೋಜ್ ಸುಬ್ರಹ್ಮಣ್ಯ, ನಿರ್ಮಾಪಕ ಅರುಣ್ ರೈ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ ಬೈಲು, ಕಲಾವಿದ ಸುಂದರ ರೈ ಮಂದಾರ, ಪ್ರಮುಖರಾದ ಜಗದೀಶ್ ಅಧಿಕಾರಿ, ಗುಣಪಾಲ ಕಡಂಬ, ರಾಜೇಶ್ ಎನ್.ಎಸ್, ಪ್ರಶಾಂತ್ ಸುವರ್ಣ, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಶೋಕ್ ಆಚಾರ್ಯ, ಗಿರಿಧರ ಸ್ಕಂಧ, ರವಿಕಕ್ಕೆಪದವು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.