ADVERTISEMENT

ಎರಡು ಹದ್ದು ಸಾವು; ಹಕ್ಕಿಜ್ವರದ ಸಾಧ್ಯತೆ, ಎಚ್ಚರಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 8:03 IST
Last Updated 8 ಜನವರಿ 2021, 8:03 IST

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಮಜಲು ಬಳಿ ಸತ್ತು ಬಿದ್ದ ಎರಡು ಹದ್ದುಗಳು ಶುಕ್ರವಾರ ಪತ್ತೆಯಾಗಿವೆ.

ನಿಡಿಗಲ್ ಮಜಲು ನಿವಾಸಿಗಳಾದ ಗೋಪಾಲ ಮಡಿವಾಳ ಹಾಗೂ ಶೇಖರ ಮಡಿವಾಳ ಅವರ ಗದ್ದೆಯಲ್ಲಿ ಹದ್ದುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಈಗಾಗಲೇ ಹಕ್ಕಿ ಜ್ವರದ ಭೀತಿ ಉಲ್ಬಣಿಸಿರುವುದರಿಂದ ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ADVERTISEMENT

ಎರಡು ಹದ್ದುಗಳು ಸತ್ತು 3 ದಿನ ಆಗಿರುವ ಸಾಧ್ಯತೆಯಿಂದ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದರಿಂದ ಪರೀಕ್ಷೆಗೆ ಮಾದರಿ ಸಂಗ್ರಹಿಸಲು ಅಸಾಧ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಪರಿಸರದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ತೆಂಗಿನ ಮರಗಳಲ್ಲಿ ಹದ್ದುಗಳು ಗೂಡು ಕಟ್ಟಿರುವುದರಿಂದ ಸುತ್ತಮುತ್ತ ಹೆಚ್ಚಾಗಿ ವಾಸಿಸುತ್ತಿವೆ. ಘಟನೆಗೆ ಹಕ್ಕಿ ಜ್ವರವೇ ಕಾರಣವೋ ಅಥವಾ ಹಕ್ಕಿಗಳೆರಡರ ಘರ್ಷಣೆ ಕಾರಣವೋ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಸಮೀಪದ 25 ಮನೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮನೆ ಮಂದಿಯಲ್ಲಿ ಜ್ವರ ಲಕ್ಷಣ ಇದೆಯೇ ಎಂಬುದನ್ನು ಪರೀಕ್ಷಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಪಶುವೈದ್ಯಾಧಿಕಾರಿ ಡಾ. ಯತೀಶ್, ಕಲ್ಮಂಜ ಗ್ರಾ.ಪಂ. ಪಿಡಿಒ ಇಮ್ತಿಯಾಝ್, ಆರೋಗ್ಯ ಇಲಾಖೆಯ ಗಿರೀಶ್ ಮತ್ತು ಸೋಮನಾಥ್, ಅರಣ್ಯ ರಕ್ಷಕ ರಾಜೇಶ್, ಆಶಾಕಾರ್ಯಕರ್ತೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.