ADVERTISEMENT

ಕಾಡು ಪ್ರಾಣಿಯ ಚರ್ಮ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:04 IST
Last Updated 22 ಜನವರಿ 2020, 16:04 IST
ಕಾಡು ಪ್ರಾಣಿಯ ಚರ್ಮದೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಅರಣ್ಯ ಇಲಾಖೆ ಅಧಿಕಾರಿಗಳ ತಂಡ
ಕಾಡು ಪ್ರಾಣಿಯ ಚರ್ಮದೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಅರಣ್ಯ ಇಲಾಖೆ ಅಧಿಕಾರಿಗಳ ತಂಡ   

ಮಂಗಳೂರು: ತಣ್ಣೀರುಬಾವಿ ಕ್ರಾಸ್‌ ಸಮೀಪದ ಕುದುರೆಮುಖ ಕಂಪನಿ ಬಸ್‌ ನಿಲ್ದಾಣದಲ್ಲಿ ಕೃಷ್ಣ ಮೃಗ ಜಾತಿಯ ಕಾಡು ಪ್ರಾಣಿಯ ಚರ್ಮದ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಇಬ್ಬರನ್ನು ಪಣಂಬೂರು ವಿಶೇಷ ಪೊಲೀಸ್‌ ದಳ ಹಾಗೂ ಮಂಗಳೂರು ಅರಣ್ಯ ಇಲಾಖೆಯ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಕೋಟುಮಚ್ಚಿಗೆ ಗ್ರಾಮದ ನಿವಾಸಿ ಪ್ರದೀಪ ಅಲಿಯಾನ್‌ ಮಲ್ಲಿಕಾರ್ಜುನ ಹಾಗೂ ಗದಗ ಜಿಲ್ಲೆಯ ಹಿರೆಕೊಪ್ಪ ಗ್ರಾಮದ ಅನಿಲ ನರಸಾಪುರ ಅಲಿಯಾಸ್‌ ಶಿವಪ್ಪ ಬಂಧಿತ ಆರೋಪಿಗಳು.

ಇಬ್ಬರು ಆರೋಪಿಗಳು ಕಾಡು ಪ್ರಾಣಿಯ ಚರ್ಮದ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ಈ ದಾಳಿ ನಡೆಸಿದ್ದು, ಪ್ರಾಣಿಯ ಚರ್ಮವನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಇಬ್ಬರು ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳನ್ನು ಇಲಾಖೆಯ ವಶದಲ್ಲಿಟ್ಟುಕೊಳ್ಳಲು ಅನುಮತಿ ನೀಡಿದೆ.

ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಳನ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ನಿರ್ದೇಶನದಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್‌ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.