ಉಜಿರೆ: ಆರೋಗ್ಯವೇ ಭಾಗ್ಯವಾಗಿದ್ದು, ದೇಶದ ಎಲ್ಲ ನಾಗರಿಕರೂ ಆರೋಗ್ಯವಂತರಾದರೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಬೆಳ್ತಂಗಡಿ ರೋಟರಿ ಕ್ಲಬ್, ಎಸ್ಡಿಎಂ ಶಿಕ್ಷಣಸಂಸ್ಥೆಗಳು, ವ್ಯಾಯಾಮ್ ಉಜಿರೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ 5 ಕಿ.ಮೀ. ಮಳೆಯಲ್ಲಿ ಓಟ (ರೈನಥಾನ್) ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮತ್ತು ಯುವಜನತೆ ದೇಶದ ಅಮೂಲ್ಯ ಸಂಪನ್ಮೂಲವಾಗಿದ್ದು, ಯಾವುದೇ ಸಂದರ್ಭದಲ್ಲೂ ಮದ್ಯವ್ಯಸನ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗಬಾರದು. ಇದು ನಮ್ಮೆಲ್ಲರ ಮನದ ಮಾತು, ಮನೆಯ ಮಾತು ಹಾಗೂ ಗುರು-ಹಿರಿಯರ ಆಶಯ ಮತ್ತು ಅಪೇಕ್ಷೆಯಾಗಿದೆ ಎಂದರು.
ಮಳೆಯಲ್ಲಿ ಓಟದ ಮೂಲಕ ವ್ಯಸನಮುಕ್ತ ಸಮಾಜಕ್ಕಾಗಿ ಅರಿವು, ಜಾಗೃತಿ ಮೂಡಿಸುವುದು ಪವಿತ್ರ ಕಾರ್ಯವಾಗಿದೆ. ಸಾಮಾಜಿಕ ಕ್ರಾಂತಿ ಹಾಗೂ ಸುಧಾರಣೆಗೆ ನಾಂದಿಯಾಗಿದೆ. ನಿಮ್ಮ ಬದ್ಧತೆಯೊಂದಿಗೆ ನಾವೆಲ್ಲರೂ ಇದ್ದೇವೆ. ಇದು ಸ್ಪರ್ಧೆಯಲ್ಲ, ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಂಗಳೂರು ಸೈಬರ್ ಪೊಲೀಸ್ ಠಾಣೆಯ ಡಿವೈಎಸ್ಪಿ ಮಂಜುನಾಥ್ ಆರ್.ಜಿ. ಪ್ರತಿಜ್ಞಾವಿಧಿ ಬೋಧಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ವರ್ಮ, ಸೋನಿಯಾವರ್ಮ, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಭಾಗವಹಿಸಿದ್ದರು.
ವಕೀಲ ಬಿ.ಕೆ.ಧನಂಜಯ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಸ್ಪರ್ಧೆಯ ಫಲಿತಾಂಶ: ಪುರುಷರ ವಿಭಾಗ: ಶಿವಾನಂದ ಚಿಗಾರಿ, ಬಾಗಲಕೋಟೆ (ಪ್ರಥಮ– ₹ 10 ಸಾವಿರ ನಗದು, ಚಿನ್ನದ ಫಲಕ), ನಾಗರಾಜ್ ಹುಬ್ಬಳ್ಳಿ (ದ್ವಿತೀಯ– ₹ 7 ಸಾವಿರ ನಗದು, ಬೆಳ್ಳಿ ಪದಕ), ರಂಗಣ್ಣ, ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು, ಎಡಪದವು, ಮೂಡುಬಿದಿರೆ (ತೃತೀಯ– ₹ ಸಾವಿರ ನಗದು, ಕಂಚಿನ ಪದಕ).
ಮಹಿಳೆಯರ ವಿಭಾಗ: ಶಹಿನ್, ಎಸ್.ಡಿ., ಧಾರವಾಡ (ಪ್ರಥಮ ₹ 10ಸಾವಿರ ನಗದು, ಚಿನ್ನದ ಪದಕ),
ಚರಿಷ್ಮಾ ಆಳ್ವಾಸ್ ಕಾಲೇಜು, ಮೂಡುಬಿದಿರೆ (ದ್ವಿತೀಯ– ₹ 7ಸಾವಿರ ನಗದು, ಬೆಳ್ಳಿ ಪದಕ), ಪ್ರಣಮ್ಯಾ, ಆಳ್ವಾಸ್ ಕಾಲೇಜು, ಮೂಡುಬಿದಿರೆ (ತೃತೀಯ–₹ 5 ಸಾವಿರ ನಗದು ಮತ್ತು ಕಂಚಿನ ಪದಕ).
ಸಮಾರೋಪದಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ ಬಹುಮಾನ ವಿತರಿಸಿದರು.
ಉಜಿರೆ: ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಜುಲೈ 1ರಂದು ಬೆಳಿಗ್ಗೆ 10 ಗಂಟೆಗೆ ಧರ್ಮಸ್ಥಳದ ಗ್ರಾಮ ಪಂಚಾಯಿತಿ ಬಳಿ ಇರುವ ನೇತ್ರಾವತಿ ಸಭಾಂಗಣದಲ್ಲಿ ಜನಸ್ಪಂದನಾ ಸಭೆ ನಡೆಯಲಿದೆ ಎಂದು ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ತಾಲ್ಲೂಕು ಮಟ್ಟದ ಎಲ್ಲ ಇಲಾಖಾಧಿಕಾರಿಗಳು, ಗ್ರಾಮಮಟ್ಟದ ಅಧಿಕಾರಿಗಳು ಇಲಾಖೆಗಳ ಯೋಜನಾ ಪ್ರಗತಿ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.