ADVERTISEMENT

ಉಳ್ಳಾಲ: ಹಿಂದೂ ಯುವತಿ ಮದುವೆಗೆ ಮುಸ್ಲಿಂ ಕುಟುಂಬ ನೆರವು

ಮದುವೆ ಖರ್ಚು ಭರಿಸಿದ ಮುಸ್ಲಿಂ ಕುಟುಂಬ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 20:39 IST
Last Updated 12 ಜುಲೈ 2021, 20:39 IST
ಮೆಹಂದಿ ಶಾಸ್ತ್ರದ ಸಂದರ್ಭದಲ್ಲಿ ಕವನಾಳೊಂದಿಗೆ ಎಂ.ಕೆ.ಕುಟುಂಬದ ಸದಸ್ಯರು.
ಮೆಹಂದಿ ಶಾಸ್ತ್ರದ ಸಂದರ್ಭದಲ್ಲಿ ಕವನಾಳೊಂದಿಗೆ ಎಂ.ಕೆ.ಕುಟುಂಬದ ಸದಸ್ಯರು.   

ಉಳ್ಳಾಲ (ದಕ್ಷಿಣ ಕನ್ನಡ): ಆರ್ಥಿಕವಾಗಿ ಹಿಂದುಳಿದ ಹಿಂದೂ ಕುಟುಂಬದ ವಧುವಿನ ಮದುವೆ ಖರ್ಚನ್ನು ಭರಿಸುವ ಮೂಲಕ ಉಳ್ಳಾಲ ಅಲೇಕಳದ ಮುಸ್ಲಿಂ ಕುಟುಂಬವೊಂದು ನೆರವಾಗಿದೆ.

ಶನಿವಾರ ಎಂ.ಕೆ. ಕುಟುಂಬದ ಹಂಝ ಅವರ ಮನೆಯಲ್ಲೇ ಮೆಹಂದಿ ಶಾಸ್ತ್ರ, ಭಾನುವಾರ ತಲಪಾಡಿ ದೇವಿಪುರದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮದುವೆ ನಡೆಯಿತು.

ಇಲ್ಲಿನ ಶಕ್ತಿನಗರದ ನಿವಾಸಿ ಗೀತಾ ಅವರ ಪತಿ ಕೆಲ ವರ್ಷಗಳ ಹಿಂದೆಯೇ ನಿಧನರಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ವರ್ಷದ ಹಿಂದೆ ಹಿರಿಯ ಮಗಳಿಗೆ ಮದುವೆ ಮಾಡಿದ್ದು, ಸಾಲದಿಂದ ಹೊರಬರಲು ಮನೆ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಮಾರಿದ್ದರು. ಲಾಕ್‌ಡೌನ್‌ನಿಂದ ದುಡಿಮೆಯೂ ಇಲ್ಲದಾಗಿತ್ತು. ಅಷ್ಟರಲ್ಲಿಯೇ ಎರಡನೇ ಮಗಳ ಮದುವೆ ನಿಶ್ಚಯವಾಗಿತ್ತು.

ADVERTISEMENT

ಉಳ್ಳಾಲ ಮಂಚಿಲದ ಎಂ.ಕೆ. ಕುಟುಂಬ ಟ್ರಸ್ಟ್ ಸದಸ್ಯ ರಝಾಕ್‌ ಅವರಿಗೆ ವಧು ಕವನಾ ಅವರ ಚಿಕ್ಕಪ್ಪ ಸುರೇಶ್ ಪರಿಚಿತರು. ಈ ಕುಟುಂಬವು ಮಗಳ ಮದುವೆ ಮಾಡಲು ಪಡುತ್ತಿರುವ ಕಷ್ಟವನ್ನು ಅವರ ಮೂಲಕ ತಿಳಿದುಕೊಂಡ ಟ್ರಸ್ಟ್‌ ಸದಸ್ಯರಾಗಿರುವ, ಮ್ಯಾರೇಜ್ ಫಂಡ್ ಅಧ್ಯಕ್ಷ ಅಬ್ದುಲ್ ರೆಹಮಾನ್‌ ಮತ್ತು ಹಂಝ ಅವರು ಮದುವೆಯ ಖರ್ಚು ಭರಿಸುವ ಭರವಸೆ ನೀಡಿದ್ದರು. ಶಾಸಕ ಯು.ಟಿ. ಖಾದರ್ ಅವರೂ ಧನಸಹಾಯ ನೀಡಿದ್ದಾರೆ.

‘ನಮ್ಮ ಕೈಯಲ್ಲಿ ಹಣ ಇರಲಿಲ್ಲ. ಪ್ರಾಣ ತ್ಯಾಗ ಮಾಡುವುದೊಂದೇ ದಾರಿ ಎನಿಸಿದಾಗ, ಯಾರೂ ಮಾಡಲಾಗದಂತಹ ಸಹಾಯವನ್ನು ಎಂ.ಕೆ. ಕುಟುಂಬಸ್ಥರು ಮಾಡಿದ್ದಾರೆ’ ಎಂದು ಕವನಾ ಅವರ ತಾಯಿ ಗೀತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.