ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಕೈಬಿಡಬೇಕು. ರಾಜ್ಯದ ಪಶ್ಚಿಮ ಘಟ್ಟ, ಜನವಸತಿ ಪ್ರದೇಶ, ಕೃಷಿ ಭೂಮಿಯನ್ನು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಗಡಿ ಗುರುತು ಮಾಡಬೇಕು ಎಂದು ಆಗ್ರಹಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ವತಿಯಿಂದ ಉಪ್ಪಿನಂಗಡಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಉಪ್ಪಿನಂಗಡಿ ವಲಯ ಅರಣ್ಯ ಕಚೇರಿ ಮುಂದೆ ಸೇರಿದ ಪ್ರತಿಭಟನಕಾರರು, ಸರ್ಕಾರವು ಪಶ್ಚಿಮ ಘಟ್ಟದ ಸರ್ವೆ ನಡೆಸಿ ಗಡಿಗುರುತು ಹಾಕಬೇಕು. ಶೂನ್ಯ ಬಫರ್ ವಲಯ ಮಾಡಿ ಅಲ್ಲಿರುವ ಜನವಸತಿ ಪ್ರದೇಶವನ್ನು ಪ್ರತ್ಯೇಕಿಸಬೇಕು. ರೈತರ ಸ್ವಾಧೀನ ಇರುವ ಕೃಷಿ ಭೂಮಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಸೈಯ್ಯದ್ ಮೀರಾ ಸಾಹೇಬ್ ಮಾತನಾಡಿ, ಪಶ್ಚಿಮ ಘಟ್ಟ ಪರಿಸರದ ಸಂರಕ್ಷಣೆ ಬಗ್ಗೆ ವರದಿ ಸಿದ್ಧಪಡಿಸುವಾಗ ತಜ್ಞರು ಪಶ್ಚಿಮಘಟ್ಟ ಪ್ರದೇಶದ ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ನಡೆಸಬೇಕು. ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಎಂದರು.
ಪ್ರತಿಭಟನಕಾರರು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಟಿ. ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಪ್ರಮೋದ್ ಕಳೆಂಜ, ಪ್ರಸನ್ನ ಕಳೆಂಜ, ಧನಂಜಯ, ನಿತ್ಯಾನಂದ ರೈ, ಹರೀಶ್ ಕೆ.ಬಿ., ರಾಮಣ್ಣ ಗೌಡ, ನೋಣಯ್ಯ ಗೌಡ, ಕೃಷ್ಣಪ್ಪ ಗೌಡ, ರಮೇಶ್ ಶಿಬಾಜೆ, ಬಾಲಕೃಷ್ಣ ಶಿಬಾಜೆ, ಜಾರ್ಜ್, ಪ್ರಶಾಂತ್, ಜಾನ್ಸನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.