ADVERTISEMENT

ಶಿರಾಡಿ ದುರಸ್ತಿ ಮಾಡಿ- ಹಾಸನ ಜಿಲ್ಲಾಧಿಕಾರಿಗೆ ಕೆಸಿಸಿಐ ಅಧ್ಯಕ್ಷರ ಮನವಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 16:10 IST
Last Updated 30 ಮಾರ್ಚ್ 2022, 16:10 IST
ಶಶಿಧರ ಪೈ ಮಾರೂರು
ಶಶಿಧರ ಪೈ ಮಾರೂರು   

ಮಂಗಳೂರು: ಕರಾವಳಿಯನ್ನು ಇತರ ಪ್ರದೇಶಗಳೊಂದಿಗೆ ಸಂಪರ್ಕಿಸುವ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೋಣಿಗಲ್‌ ಮತ್ತು ಮಾರನಹಳ್ಳಿ ನಡುವೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲಕ್ಕೆ ಮೊದಲು ಸರಕು ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡಿಸಬೇಕು ಎಂದು ಕೆನರಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ (ಕೆಸಿಸಿಐ) ಅಧ್ಯಕ್ಷ ಶಶಿಧರ ಪೈ ಮಾರೂರು ಹಾಸನ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದೋಣಿಗಲ್‌ ಮತ್ತು ಮಾರನಹಳ್ಳಿ ನಡುವೆ 220 ಕಿ.ಮೀ. ಯಿಂದ 230 ಕಿ.ಮೀ. ನಡುವಿನ ರಸ್ತೆ ಸಂಚಾಕ್ಕೆ ಅನರ್ಹವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಮಾರೂರು ಒತ್ತಾಯಿಸಿದ್ದಾರೆ.

ಮಂಗಳೂರು ಬಂದರು ಸೇರಿದಂತೆ ಕರಾವಳಿ ಜಿಲ್ಲೆಗಳ ವಾಣಿಜ್ಯ ವ್ಯವಹಾರದ ವಾಹನ ಸಂಚಾರಕ್ಕೆ ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ–75ರ ಸಂಪರ್ಕ ಅತ್ಯಗತ್ಯವಾಗಿದ್ದು, ಹೆದ್ದಾರಿ ದುರಸ್ತಿ ಆಗದದಿದ್ದರೆ, ವಾಣಿಜ್ಯ ವ್ಯವಹಾರಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಎಲ್ಲ ಕಾರಣದಿಂದ ಈ ರಸ್ತೆಯನ್ನು ಸರಕು ವಾಹನಗಳಿಗೆ ಮಳೆಗಾಲದಲ್ಲೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡಿಸಬೇಕೆಂದು ಹಾಸನ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪ್ರದೇಶದ ಶಾಸಕರು, ಸಂಸದರಿಗೂ ಕ್ರಮಕ್ಕಾಗಿ ಶಶಿಧರ ಮಾರೂರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.