ADVERTISEMENT

ಮಂಗಳೂರು | ಎಸ್‌ಐಆರ್ ಪೌರತ್ವ ರದ್ದತಿಯ ಹುನ್ನಾರ: ವಾಸು ಎಚ್.ವಿ.

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 3:02 IST
Last Updated 17 ಫೆಬ್ರುವರಿ 2026, 3:02 IST
ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ವಿಚಾರ ಸಂಕಿರಣವನ್ನು ಜೆ.ಆರ್.ಲೋಬೊ ಉದ್ಘಾಟಿಸಿದರು
ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ವಿಚಾರ ಸಂಕಿರಣವನ್ನು ಜೆ.ಆರ್.ಲೋಬೊ ಉದ್ಘಾಟಿಸಿದರು   

ಮಂಗಳೂರು: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್.ಐ.ಆರ್.) ಮೂಲಕ ಮತದಾರರು ಪಟ್ಟಿಯಲ್ಲಿ ತಮ್ಮ ಇರುವಿಕೆಯನ್ನು ನಿರೂಪಿಸಬೇಕಾಗಿದೆ. ಒಂದೊಮ್ಮೆ ವಿಫಲರಾದಲ್ಲಿ ಭವಿಷ್ಯದಲ್ಲಿ ಅವರ ನಾಗರಿಕರ ಪೌರತ್ವ ರದ್ದುಗೊಳಿಸುವ ಹುನ್ನಾರ ನಡೆಯುತ್ತಿದೆ’ ಎಂದು ಜಾಗೃತ ಕರ್ನಾಟಕದ ಸಂಚಾಲಕ ವಾಸು ಎಚ್.ವಿ. ಹೇಳಿದರು.

ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ವತಿಯಿಂದ ಸೋಮವಾರ ಇಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ವಿಚಾರ ಸಂಕಿರಣದಲ್ಲಿ ‘ಎಸ್‌ಐಆರ್ ಭಾರತದ ಪ್ರಜಾಪ್ರಭುತ್ವದ ಮೂಲ ಬೇರನ್ನು ಹೇಗೆ ಅಲುಗಾಡಿಸುತ್ತಿದೆ ಮತ್ತು ಎಸ್‌ಐಆರ್‌ ಭಾರತದ ಪ್ರಜಾತಂತ್ರಕ್ಕೆ 75 ವರ್ಷಗಳ ಇತಿಹಾಸದಲ್ಲೇ ಅತಿ ದೊಡ್ಡ ಅಪಾಯ ಹೇಗೆ?’ ವಿಷಯದ ಕುರಿತು ಅವರು ಮಾತನಾಡಿದರು. 

ಭಾರತದ ಸಂವಿಧಾನವು 18 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡಿದೆ. ಆದರೆ, ಎಸ್‌ಐಆರ್ ಮೂಲಕ ಮತದಾರರ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಅಸಂವಿಧಾನ ನಿಲುವು. ಎಸ್ಐಆರ್ ಎನ್ನುವುದು ಸಿಎಎ-ಎನ್.ಆರ್.ಸಿ.ಯ ಇನ್ನೊಂದು ರೂಪವಾಗಿದೆ. ದೇಶದ ಸಂವಿಧಾನವು ಉಳಿದುಕೊಂಡು ಬಂದಿದ್ದು ಬಡವರು ಮತ್ತು ಮಧ್ಯಮ ವರ್ಗದ ಜನರಿಂದ. ಆಡಳಿತ ದಾರಿ ತಪ್ಪಿದಾಗ ಚುನಾವಣೆ ಮೂಲಕ ಆಡಳಿತ ಪಕ್ಷಕ್ಕೆ ಸೋಲಿನ ರುಚಿ ತೋರಿಸಿ ಎಚ್ಚರಿಸುವವರು ಮತದಾರರು. ಎಸ್ಐಆರ್ ಮೂಲಕ ಈ ಅವಕಾಶವನ್ನು ಕಸಿದುಕೊಳ್ಳಲಾಗುತ್ತಿದೆ ಎಂದರು. 

ADVERTISEMENT

ಎಸ್‌ಐಆರ್‌ನಲ್ಲಿ ಶೇ 60– 65ರಷ್ಟು ಮಹಿಳೆಯರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಬಿಹಾರದ ಚುನಾವಣೆ ವೇಳೆ 64 ಲಕ್ಷದಷ್ಟು ಜನರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಯಿತು. ತಮಿಳುನಾಡಿನಲ್ಲಿ 1.20 ಕೋಟಿ ಜನರಿಗೆ ನೋಟಿಸ್ ನೀಡಲಾಗಿದೆ. ಪರಿಷ್ಕರಣೆಗೆ ಸಂಬಂಧಿಸಿ ಸಾಫ್ಟ್‌ವೇರ್ ತಯಾರಿಸಲಾಗಿದ್ದು, ಅದರ ಮೂಲಕ ಮತದಾರರನ್ನು ಹೊರಗಿಡುವ ಕೆಲಸ ನಡೆಯುತ್ತಿದೆ ಎಂದರು. 

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಜೆ.ಆರ್. ಲೋಬೊ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ, ಮುಖಂಡರಾದ ಪದ್ಮನಾಭ ಕೋಟ್ಯಾನ್, ವಿಶ್ವಾಸ್ ದಾಸ್, ಕೆ.ಪಿ. ಥಾಮಸ್, ಮನೋರಾಜ್, ಅಬ್ದುಲ್ ಶರೀಫ್, ನಾಗೇಶ್, ಸದಾಶಿವ ಶೆಟ್ಟಿ ಇದ್ದರು.

ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ವಿಷಯ ಮಂಡಿಸಿದರು. ಡೆನಿಸ್ ಡಿಸಿಲ್ವ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ನಿರೂಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.