ಮಂಗಳೂರು: ಮಾಂಡ್ ಸೊಭಾಣ್ ಕೊಂಕಣಿ ಸಂಘಟನೆಯ ವತಿಯಿಂದ ನವ ದಿನಗಳ ವೋಪ್ (ಒಪ್ಪ) ಬೇಸಿಗೆ ಶಿಬಿರವು ಶನಿವಾರದಿಂದ ಶಕ್ತಿನಗರದ ಕಲಾಂಗಣದಲ್ಲಿ ಆರಂಭವಾಗಿದೆ.
ಗಾಯಕ ಮತ್ತು ಸಂಗೀತಗಾರ ರಿತೇಶ್ ಒಝೇರಿಯೊ ಮಣ್ಣಿನ ಮೂರ್ತಿಗೆ ಚಿನ್ನದ ಬಣ್ಣ ಬಳಿದು ಶಿಬಿರ ಉದ್ಘಾಟಿಸಿದರು. ನಾಟಕಕಾರ ಫ್ರಾನ್ಸಿಸ್ ಫರ್ನಾಂಡೀಸ್ ಕಾಸ್ಸಿಯಾ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು.
ಅರುಣ್ ರಾಜ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರ ವ್ಯವಸ್ಥಾಪಕ ವಿಕ್ಟರ್ ಮಥಾಯಸ್ ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೇರನ್ ಮಾಡ್ತಾ ನಿರೂಪಿಸಿದರು.
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 31 ಬಾಲಕಿಯರು ಮತ್ತು 27 ಬಾಲಕರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ನೃತ್ಯ, ನಾಟಕ, ಗಾಯನ,ಕೊಂಕಣಿ ಭಾಷೆ- ಸಂಸ್ಕೃತಿ, ಭಾಷಣ, ಟಿವಿ, ಕಾರ್ಯಕ್ರಮ ನಿರೂಪಣೆ ಮೊದಲಾದ ಕಲೆಗಳನ್ನು ಮಕ್ಕಳು ಶಿಬಿರದಲ್ಲಿ ಕಲಿಯುತ್ತಾರೆ. ಮೇ 5ರಂದು ನಡೆಯುವ 269ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಮಕ್ಕಳು ಪ್ರಸ್ತುತಪಡಿಸಲಿದ್ದಾರೆ.
ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಈ ಶಿಬಿರಕ್ಕೆ ಮಾನ್ಯತೆ ದೊರೆತಿದೆ.
1999ರಿಂದ ಈ ಶಿಬಿರ ನಡೆಯುತ್ತಿದ್ದು, ಸಾವಿರಾರು ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.