ADVERTISEMENT

ಉಜ್ವಲ ಭವಿಷ್ಯಕ್ಕಾಗಿ ಗೋಡೆ ಚಿತ್ರ: ಮಂಗಳೂರಿನ ಯುವಕರ ಅದ್ಭುತ ಸಂದೇಶ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 12:09 IST
Last Updated 29 ಸೆಪ್ಟೆಂಬರ್ 2020, 12:09 IST
ಕಲಾವಿದರ ಕೈಚಳಕದಲ್ಲಿ ಗೋಡೆಯ ಮೇಲೆ ಅರಳಿದ ಮೀನು ಮಾರುವ ಮಹಿಳೆಯ ಚಿತ್ರ.
ಕಲಾವಿದರ ಕೈಚಳಕದಲ್ಲಿ ಗೋಡೆಯ ಮೇಲೆ ಅರಳಿದ ಮೀನು ಮಾರುವ ಮಹಿಳೆಯ ಚಿತ್ರ.   

ಮಂಗಳೂರು: ಉಜ್ವಲ ಭವಿಷ್ಯ ರೂಪಿಸುವ ದೃಷ್ಟಿಯಿಂದ ಅಗತ್ಯವಿರುವ ಸಂದೇಶಗಳನ್ನು ಹೊತ್ತ ಚಿತ್ರಗಳು ಇದೀಗ ನಗರದ ಗೋಡೆಗಳನ್ನು ಅಲಂಕರಿಸುತ್ತಿವೆ. ನಗರದ ವಿವಿಧೆಡೆ ಯುವ ಕಲಾವಿದರ ತಂಡವೊಂದು ಇಂತಹ ಸಾಮಾಜಿಕ ಚಿತ್ರಗಳನ್ನು ರಚಿಸುವ ಮೂಲಕ ಯುವ ಪೀಳಿಗೆಗೆ ಭವಿಷ್ಯದ ಜೀವನದ ಪಾಠವನ್ನು ಬೋಧಿಸುತ್ತಿದೆ.

ಅವಿಭಕ್ತ ಕುಟುಂಬದ ಪರಿಕಲ್ಪನೆ ಮಾಯವಾಗುತ್ತಿದ್ದು, ಹಿರಿಯನ್ನು ಹೊರಗಿಟ್ಟ ವಿಭಕ್ತ ಕುಟುಂಬಗಳೇ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹಿರಿಯನ್ನು ಕಡೆಗಣಿಸಬೇಡಿ ಎನ್ನುವ ಸಂದೇಶವನ್ನು ಈ ತಂಡ ನೀಡುತ್ತಿದೆ. ‘ಪಿಂಕ್ಷಿಲ್‌’ (Pinxcil) ಎನ್ನುವ ಹೆಸರನ್ನು ಹೊಂದಿರುವ ಈ ತಂಡದ ಸದಸ್ಯರಾದ ವಿನೋದ್‌, ಪೃಥ್ವಿ, ಅಜೀಶ್‌, ಅಭಿಜಿತ್‌ ಮತ್ತು ನಿತೇಶ್‌, ನಗರದ ಬೃಹತ್‌ ಗೋಡೆಗಳಲ್ಲಿ ಚಿತ್ರ ರಚಿಸುತ್ತಿದ್ದಾರೆ.

ಈ ಬಗ್ಗೆ ಯೋಚನೆ ಮಾಡುತ್ತಿದ್ದ ತಂಡದ ಸದಸ್ಯರು, ಎಲ್ಲಿ ಚಿತ್ರ ಬಿಡಿಸಬೇಕು ಎನ್ನುವ ಆಲೋಚನೆಯಲ್ಲಿದ್ದರು. ಆಗ ಅನಿರೀಕ್ಷಿತವಾಗಿ ಒಂದು ಮನೆಯ ಖಾಲಿ ಗೋಡೆಯನ್ನು ಗಮನಿಸಿದರು. ಅದರ ಮಾಲೀಕ ಚಂದ್ರಹಾಸ ಎನ್ನುವ ಹಿರಿಯರನ್ನು ಭೇಟಿ ಮಾಡಿದರು. ಅವರು ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡಿ, ಅವರದೇ ಚಿತ್ರವನ್ನು ಬಿಡಿಸುವ ಮೂಲಕ ‘ಇದು ನಾಳೆಯ ನೀವು’ (ಇಟ್ಸ್‌ ಯು ಟುಮಾರೊ) ಎನ್ನುವ ಸಂದೇಶವನ್ನು ಬರೆದರು.

ADVERTISEMENT

ಗೋಡೆಗಳೇ ಏಕೆ: ಸಾಮಾನ್ಯವಾಗಿ ಕಲಾವಿದರು ಮ್ಯೂಸಿಯಂ ಅಥವಾ ಚಿತ್ರಕಲಾ ಪ್ರದರ್ಶನದ ಮೂಲಕ ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಾರೆ. ಆದರೆ, ಸಾಮಾನ್ಯ ಜನರಿಗೆ ಸುಲಭವಾಗಿ ಕಾಣುವ ಮನೆಯ ಖಾಲಿ ಗೋಡೆಗಳೇ ಉತ್ತಮ ವೇದಿಕೆ ಎಂದು ನಿರ್ಧರಿಸಿದ ಈ ಕಲಾವಿದರು, ತಮ್ಮ ಕಲೆಯನ್ನು ಬಿತ್ತರಿಸುತ್ತಿದ್ದಾರೆ.

ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ಸಂದೇಶವುಳ್ಳ ಚಿತ್ರಗಳನ್ನು ಬಿಡಿಸಿರುವ ಈ ತಂಡ, ಇದೀಗ ಉರ್ವದಲ್ಲಿ ಮೀನು ಮಾರುವ ಹಿರಿಯ ಮಹಿಳೆಯೊಬ್ಬರ ಚಿತ್ರವನ್ನು ಬಿಡಿಸಿದೆ. ಈ ಮೂಲಕ ಸಾಮಾನ್ಯ ಜನರ ಅದ್ಭುತ ಕಾರ್ಯವನ್ನು ಎತ್ತಿ ತೋರಿಸುವ ಕೆಲಸ ಮಾಡಿದೆ. ಉರ್ವ ಮಾರುಕಟ್ಟೆಯ ಮೀನು ಮಾರಾಟ ಮಹಿಳೆಯ ಚಿತ್ರವು ಮೊಗವೀರ ಸಮುದಾಯಕ್ಕೆ ಅರ್ಪಣೆ ಎಂದು ಈ ತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.