ಮಂಗಳೂರು: ಇಲ್ಲಿನ ಶಕ್ತಿನಗರದಲ್ಲಿ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷ ಪುತ್ರಿ, ಪುತ್ರ ಹಾಗೂ ತಾಯಿಗೆ ನಿದ್ರೆ ಮಾತ್ರೆ ನೀಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಹಾಗೂ ಆಕೆಯ ಪುತ್ರಿ ಮೃತಪಟ್ಟಿದ್ದು, ಪುತ್ರ ಮತ್ತು ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಕ್ತಿನಗರದ ಕೆ.ಎಚ್.ಬಿ. ಕಾಲೊನಿಯ ಪ್ರಮಿಳಾ (38) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಆಕೆಯ ತಾಯಿ ಶಶಿಕಲಾ (60) ಮತ್ತು ಪುತ್ರ ಆಶಿಸ್ (15) ಪ್ರಾಣಾಪಾಯದಿಂದ ಪಾರಾದವರು.
ಪ್ರಮಿಳಾ ಅವರ ಪತಿ ರವಿ ಶೆಟ್ಟಿ ಕೂಳೂರು ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಶನಿವಾರವೂ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಪತ್ನಿ ಪ್ರಮಿಳಾ, ಆಕೆಯ ತಾಯಿ ಶಶಿಕಲಾ, ಪುತ್ರ ಆಶಿಸ್ ಮತ್ತು ಒಂದುವರೆ ವರ್ಷದ ಪುತ್ರಿ ಇದ್ದರು. ಮಧ್ಯಾಹ್ನ ಊಟದ ವೇಳೆ ಪ್ರಮೀಳಾ ಮನೆಯಲ್ಲಿದ್ದ ಎಲ್ಲರಿಗೂ ನಿದ್ರೆ ಮಾತ್ರೆ ನೀಡಿದ್ದು, ಅವರೆಲ್ಲರೂ ನಿದ್ರೆಗೆ ಜಾರಿದ ಬಳಿಕ ಆಕೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ ತಾಯಿ ಶಶಿಕಲಾ ಎಚ್ಚರಗೊಂಡಿದ್ದು, ಚಹಾ ಮಾಡಿ ಪುತ್ರಿ ಪ್ರಮಿಳಾರನ್ನು ಕರೆಯಲು ಮಾಳಿಗೆಗೆ ತೆರಳಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಪ್ರಮೀಳಾ ಡೆತ್ ನೋಟ್ ಬರೆದಿಟ್ಟಿದ್ದು, ನಿಖರ ಮಾಹಿತಿ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.