ಮಂಗಳೂರು: ರಸ್ತೆಗೆ ಕಾಂಕ್ರಿಟೀಕರಣ ಮಾಡುವ ವೇಳೆ ವೃದ್ಧೆಯೊಬ್ಬರು ನಡುರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಮಂಗಳವಾರ ನಡೆದಿದೆ.
ವಾರ್ಡ್ ನಂ.28ರಲ್ಲಿ ಮೂರು ಮನೆಗಳನ್ನು ಸಂಪರ್ಕಿಸುವ ಓಣಿ ರಸ್ತೆಗೆ ಪಾಲಿಕೆ ವತಿಯಿಂದ ಕಾಂಕ್ರೀಟೀಕರಣ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ವೈಲೇಟ್ ಪಿರೇರಾ ಅವರು, ‘ಈ ಖಾಸಗಿ ಜಾಗ ನನಗೆ ಸೇರಿದ್ದು, ಇಲ್ಲಿ ಬಲವಂತವಾಗಿ ಕಾಂಕ್ರಿಟೀಕರಣ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಏಕಾಂಗಿಯಾಗಿ ಪ್ರತಿಭಟಿಸಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳಲ್ಲಿ ‘ಕಾಮಗಾರಿ ಆದೇಶ ಪತ್ರ ತನ್ನಿ’ ಎಂದು ವೃದ್ಧೆ ಒತ್ತಾಯಿಸಿದರು. ‘ಈ ಕಾಮಗಾರಿಯಿಂದ ನನ್ನ ಮನೆಯಂಗಳಕ್ಕೆ ನೀರು ನುಗ್ಗುತ್ತಿದೆ’ ಎಂದು ಆರೋಪಿಸಿದರು.
ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್ ವೃದ್ಧೆಯನ್ನು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ವೃದ್ಧೆಯನ್ನು ಎಷ್ಟೇ ಮನವೊಲಿಸಿದರೂ ಮಲಗಿದ್ದಲ್ಲಿಂದ ಕದಲಲಿಲ್ಲ. ಕೊನೆಗೆ ಪ್ರತಿರೋಧದ ಮಧ್ಯೆಯೂ ಪೊಲೀಸರು ಆಕೆಯನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ವೃದ್ಧೆಯನ್ನು ಬಲವಂತದಿಂದ ಎತ್ತುವಾಗ ಒಂದಿಬ್ಬರ ಕೈಗೆ ಆಕೆ ಕಚ್ಚಿದ ಪ್ರಸಂಗವೂ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.