ಬಂಧನ
(ಸಾಂದರ್ಭಿಕ ಚಿತ್ರ)
ಮಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆ ಎಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ₹ 1 ಲಕ್ಷ ಪಡೆದು ವಂಚಿಸಿದ ಆರೋಪಿಯನ್ನು ನಗರದ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗುರುವಾಯನಕೆರೆಯ ಜಿ.ಅಬ್ದುಲ್ ಕರೀಮ್ ಅಲಿಯಾಸ್ ‘ಕೂಳೂರು ಉಸ್ತಾದ್’ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
‘ಸಂತ್ರಸ್ತ ಮಹಿಳೆ 2022ರಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು. ಆಗ ಹೆಜಮಾಡಿಯಲ್ಲಿದ್ದ ಆರೋಪಿಯ ಮನೆಗೆ ಅಕ್ಕನ ಗಂಡನ ಸಲಹೆ ಮೇರೆಗೆ ಹೋಗಿದ್ದರು. ಮಹಿಳೆ ಯಾರೋ ಮಾಟಮಂತ್ರ ಮಾಡಿಸಿದ್ದು, ಅದನ್ನು ತೆಗೆಸಬೇಕು ಎಂದು ಆತ ಹೇಳಿದ್ದ. ಮಹಿಳೆಯನ್ನು ಆಗಾಗ ಮನೆಗೆ ಕರೆಸಿಕೊಂಡಿದ್ದ. ಮಹಿಳೆಯು ಅಕ್ಕನ ಜೊತೆ ಆರೋಪಿ ಬಳಿಗೆ ಹಲವು ಸಲ ಹೋಗಿದ್ದರು. 2022ರ ಫೆ.10 ರಂದು ಸಂತ್ರಸ್ತೆ ಒಬ್ಬರೇ ಆರೋಪಿಯ ಮನೆಗೆ ಹೋಗಿದ್ದರು. ಅಲ್ಲಿ ಕುರಾನ್ ಓದಿಸಿದ್ದ ಆರೋಪಿ ಚಿಕಿತ್ಸೆಯ ನೆಪದಲ್ಲಿ ಮಹಿಳೆಯ ಮೈಮುಟ್ಟಿ ಕಿರುಕುಳ ನೀಡಿದ್ದ. ಆಕೆಯಿಂದ ₹ 55 ಸಾವಿರ ಪಡೆದಿದ್ದ ಎಂದು ಮಹಿಳೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನಾನು ಹೆಜಮಾಡಿಗೆ ಹೋದಾಗಲೆಲ್ಲಾ, ಚಿಕಿತ್ಸೆಗೆ ಹಣ ನೀಡುವಂತೆ ಒತ್ತಾಯಿಸಿ ಆರೋಪಿಸಿ ಸುಮಾರು ₹ 1 ಲಕ್ಷ ಪಡೆದುಕೊಂಡು ವಂಚಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಾಲಕೃಷ್ಣ ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.