ADVERTISEMENT

ದುಬೈಯಲ್ಲಿ ‘ದಾಶರಥಿ ದರ್ಶನ’ 9ಕ್ಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 4:48 IST
Last Updated 7 ಜೂನ್ 2024, 4:48 IST
ಯಕ್ಷಗಾನ ಅಭ್ಯಾಸ ಕೇಂದ್ರದ ಲೋಗೊ
ಯಕ್ಷಗಾನ ಅಭ್ಯಾಸ ಕೇಂದ್ರದ ಲೋಗೊ   

ಮಂಗಳೂರು: ದುಬೈ ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರವು ಇದೇ 9ರಂದು ‘ದುಬೈ ಯಕ್ಷೋತ್ಸವ’ ಹಮ್ಮಿಕೊಂಡಿದೆ.

ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇಯ ಬಾಲ, ಪ್ರೌಢ ಕಲಾವಿದರಿಂದ ‘ದಾಶರಥಿ ದರ್ಶನ’ ಕನ್ನಡ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿ ಗಾನ ಸಾರಥ್ಯ, ಭಾಗವತರಾದ ಭವ್ಯಶ್ರೀ ಕುಲ್ಕುಂದ ಭಾಗವತಿಕೆ, ಹಿಮ್ಮೇಳದಲ್ಲಿ ಸವಿನಯ ನೆಲ್ಲಿತೀರ್ಥ, ಮಯೂರ ನಾಯ್ಕ್, ಚಕ್ರತಾಳದಲ್ಲಿ ಭವ್ಯಶ್ರೀ ಅವರ ಪುತ್ರ ಅಗಸ್ತ್ಯ ಕುಲ್ಕುಂದ, ಜೊತೆಗೆ ಸ್ಥಳೀಯ ಕಲಾವಿದರು ಸಹಕರಿಸಲಿದ್ದಾರೆ.

ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿ ಕೊಟ್ಟಿಂಜ ನೇತೃತ್ವದಲ್ಲಿ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ನಿರ್ದೇಶನದಲ್ಲಿ, ಕೇಂದ್ರದ ಕಲಾವಿದರು ಪ್ರದರ್ಶನದ ಸಿದ್ಧತೆಯಲ್ಲಿದ್ದಾರೆ. ಕಿನ್ನಿಗೋಳಿ ಮೋಹಿನಿ ಕಲಾ ಸಂಪದದ ಕಲಾವಿದರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿ ಮೊದಲಾದವರು ಈಗಾಗಲೇ ದುಬೈ ತಲುಪಿ ಸಿದ್ಧತೆ ಆರಂಭಿಸಿದ್ದಾರೆ.

ADVERTISEMENT

ಪೂರ್ವರಂಗದಲ್ಲಿ ಗಣಪತಿ ಕೌತುಕ, ಏಕಕಾಲದಲ್ಲಿ ಮೂರು ರಂಗಸ್ಥಳಗಳಲ್ಲಿ ಪ್ರಸಂಗ ಆರಂಭ, ವೈಭವಪೂರ್ಣ ವಿಶೇಷ ಸೆಟ್ಟಿಂಗ್‌ ಈ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಒಟ್ಟು 127 ಪಾತ್ರಗಳು ಈ ಪ್ರಸಂಗದಲ್ಲಿವೆ. ಕುಂಬಳೆ ಪಾರ್ತಿಸುಬ್ಬ, ಜತ್ತಿ ಈಶ್ವರ ಭಟ್, ಕಾಸರಗೋಡು ಸುಬ್ರಾಯ ಪಂಡಿತ, ಎಂ.ಎ.ಹೆಗಡೆ ಶಿರಸಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಹೊಸ್ತೋಟ ಮಂಜುನಾಥ ಭಾಗವತ ಮೊದಲಾದವರು ರಚಿಸಿದ ಪ್ರಸಂಗದ ಹೂರಣದಿಂದ ‘ದಾಶರಥಿ ದರ್ಶನ’ ರೂಪುಗೊಂಡಿದೆ.

ಈ ಬಾರಿಯ ‘ಯಕ್ಷಶ್ರೀ ರಕ್ಷಾ’ ಗೌರವ ಪ್ರಶಸ್ತಿಯನ್ನು ಕಲಾವಿದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಅವರಿಗೆ ಪ್ರದಾನ ಮಾಡಲಾಗುವುದು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ ಮತ್ತು ಯುಎಇಯ ಗಣ್ಯರು ಭಾಗವಹಿಸುವರು ಎಂದು ಅಭ್ಯಾಸ ಕೇಂದ್ರದ ಮಾಧ್ಯಮ ಪ್ರಚಾರ ಸಂಯೋಜಕ ಗಿರೀಶ್ ನಾರಾಯಣ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.