ಮಂಗಳೂರು: ವೈ’ಸ್ ಮೆನ್ ಇಂಟರ್ ನ್ಯಾಷನಲ್ ಕ್ಲಬ್ ಮಂಗಳೂರು ಘಟಕದ ವತಿಯಿಂದ ಶುಕ್ರವಾರ 100ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಧಾನ್ಯ ಮತ್ತಿತರ ಪರಿಕರಗಳ ನೆರವು ನೀಡಲಾಯಿತು.
ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅಶೋಕ್ ಮಾತನಾಡಿ, ‘ಕೊರೊನಾ ಕಾಲದಲ್ಲಿ ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ವೈ’ಸ್ ಮೆನ್ ಮಾನವೀಯ ನೆರವು ಶ್ಲಾಘನೀಯವಾಗಿದೆ. ಸಂಘಟನೆಗಳು ಇಂತಹ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದರು.
‘ಗಾಂಧಿ ಹುಟ್ಟಿದ ದಿನದಂದು ಸೇವಾಕಾರ್ಯ ಕೈಗೊಳ್ಳುತ್ತಿರುವುದು ನಿಜವಾಗಲೂ ಧನ್ಯ. ಅಶಕ್ತ ಫಲಾನುಭವಿಗಳ ಆಶೀರ್ವಾದ ನಿಮ್ಮ ಸಂಘಟನೆಗೆ ಬಲ ನೀಡುತ್ತದೆ. ಶೀಘ್ರವೇ ನಗರದಲ್ಲಿ ಕಚೇರಿ ಆರಂಭಗೊಳ್ಳಲಿ’ ಎಂದು ಮಹಾನಗರ ಪಾಲಿಕೆ ಸದಸ್ಯೆ ವೀಣಾ ಕ್ಲಬ್ ಸೇವೆಯನ್ನು ಅಭಿನಂದಿಸಿದರು.
‘1922ರಲ್ಲಿ ಅಮೆರಿಕಾದಲ್ಲಿ ಹುಟ್ಟಿದ ವೈ’ಸ್ಮೆನ್ ಕ್ಲಬ್ನ ಘಟಕವು 2008ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಅಂದಿನಿಂದ ಪೆರ್ಲದ ಎಂಡೋ ಪೀಡಿತರ ಶಾಲೆಗೆ ಕೊಡುಗೆ, ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆಹಾರ, ನೆಲ್ಯಾಡಿಯಲ್ಲಿ ಆರೋಗ್ಯ ಶಿಬಿರ, ಬಡವರಿಗೆ ನೆರವು, ಕೋವಿಡ್ ಸಂದರ್ಭ ಬಡವರಿಗೆ ಆಹಾರ ಕಿಟ್ ಮತ್ತಿತರ ಸೇವಾ ಕೈಂಕರ್ಯವನ್ನು ಮಾಡಿಕೊಂಡು ಬಂದಿದೆ’ ಎಂದು ಚಟುವಟಿಕೆಗಳ ಬಗ್ಗೆ ಕ್ಲಬ್ನ ಕೆ.ಜೆ.ಆ್ಯಂಟನಿ ಮಾಹಿತಿ ನೀಡಿದರು.
ಪಾಲಿಕೆ ಮಾಜಿ ಸದಸ್ಯ ನಾಗೇಂದ್ರ ಕ್ಲಬ್ ಅಧ್ಯಕ್ಷ ಆ್ಯಂಟನಿ ಪಿ.ಡಿ, ಕಾರ್ಯದರ್ಶಿ ಬೆನ್ನಿ ವರ್ಗೀಶ್, ಪ್ರಕಾಶ್ ಜಾರ್ಜ್, ಆ್ಯಮಟನಿ, ವಿ.ಎಂ. ಜೋಶಿ, ಸುನೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.