ADVERTISEMENT

ಆಂಜನೇಯ ಸ್ವಾಮಿ ಉತ್ಸವಕ್ಕೆ ತೆರೆ

ಸಂತೇಬೆನ್ನೂರು: ಓಕುಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:48 IST
Last Updated 22 ಏಪ್ರಿಲ್ 2013, 8:48 IST

ಮಲೇಬೆನ್ನೂರು: ಸಮೀಪದ ಹರಳಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ದೇವಾಲಯದ ಎದುರು ಭಾನುವಾರ ಕುಂಕುಮಸೇವೆ ವಿಜೃಂಭಣೆಯಿಂದ ಜರುಗಿತು.

ರಾಮನವಮಿ ರಥೋತ್ಸವದ ಕೊನೆ ದಿನ ಭೂತದ ಹಲಗೆ (ಮಣೇವು ಸೇವೆ), ದಾಸಪ್ಪ, ಗ್ವಾರಪ್ಪಗಳಿಂದ ಹರಕೆ ಸಮರ್ಪಣೆ ಹಾಗೂ ಬುಕ್ಕಿಟ್ಟಿನ ಸೇವೆಗೆ ಹೆಚ್ಚಿನ ಸಂಖ್ಯೆ ಭಕ್ತರು ಭಾಗವಹಿಸಿದ್ದರು.

ಕುಂಕುಮ ಉತ್ಸವದಲ್ಲಿ ಗ್ರಾಮಗಳ ಬೀದಿಯಲ್ಲಿ ಮಕ್ಕಳು, ಮಹಿಳೆಯರು, ಹಿರಿಯರು ವಯಸ್ಸು ಮರೆತುಪಾಲ್ಗೊಂಡಿದ್ದರು. ನಾಸಿಕ್‌ಡೋಲು, ಮಂಗಳವಾದ್ಯ, ಹಾಡಿಗೆ ತಕ್ಕಂತೆ ಯುವ ಸಮೂಹ ನರ್ತಿಸಿ ಪರಸ್ಪರ ಬಣ್ಣ ಎರಚಿಕೊಂಡರು.

ಗ್ರಾಮಸ್ಥರು ರಥೋತ್ಸವಕ್ಕೆ ಅಲಂಕರಿಸಿದ್ದ ಬಾಳೆಹಣ್ಣಿನ ಗೊನೆ, ಹೂವಿನ ಹಾರ, ತೆಂಗಿನಕಾಯಿ, ಧ್ವಜ ಪತಾಕೆಗಳ ಹರಾಜು ಮಾಡಿದರು.
ಪಲ್ಲಕ್ಕಿ ಉತ್ಸವ: ಸಮೀಪದ ಕೊಕ್ಕನೂರಿನ ಅಂಜನೇಯ ಸ್ವಾಮಿ ಬೇಟೆ ಆಟ, ಗ್ರಾಮ ಸಂದರ್ಶನ ಹಾಗೂ ಧನ, ಹರಕೆ ಸಮರ್ಪಣೆ ಅದ್ದೂರಿಯಾಗಿ ಜರುಗಿತು. 

ವೀರಭದ್ರೇಶ್ವರ ರಥೋತ್ಸವ
ಸಂತೇಬೆನ್ನೂರು:
ಇಲ್ಲಿಗೆ ಸಮೀಪದ ಹಿರೇಕೋಗಲೂರಿನಲ್ಲಿ ಶನಿವಾರ ಸಂಜೆ ವಿಜೃಂಭಣೆಯ ಶ್ರೀವೀರಭದ್ರೇಶ್ವರ ರಥೋತ್ಸವ ಗ್ರಾಮದ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಭಕ್ತಿಯಿಂದ ರಥದೆಡೆಗೆ ತರಲಾಯಿತು. ರಥದ ಪೀಠದಲ್ಲಿ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಯಿತು. ಭಕ್ತ ಸಮೂಹ ಬಾಳೆಹಣ್ಣು ಎಸೆದು, ಚಕ್ರಕ್ಕೆ ತೆಂಗಿನಕಾಯಿ ಹೊಡೆದು ಭಕ್ತಿ ಸಮರ್ಪಿಸಿದರು.

ಬಣ್ಣದ ವಸ್ತ್ರ ಹಾಗೂ ಹೂವಿನ ಹಾರಗಳಿಂದ ರಥವನ್ನು ಅಲಂಕರಿಸಲಾಗಿತ್ತು. ಗ್ರಾಮದ ಮುಖ್ಯ ವೃತ್ತದ ಬಳಿ ಬೃಹತ್ ರಥ ಘೋಷಣೆ ಕೂಗುತ್ತಾ ನೆರೆದ ಭಕ್ತರು ಮುಖ್ಯ ರಸ್ತೆಯಲ್ಲಿ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.