ದಾವಣಗೆರೆ: ಅದು 2013ರ ನವೆಂಬರ್ ತಿಂಗಳು. ಬೆಂಗಳೂರಿನ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಘಟನೆ ರಾಜ್ಯದಾದ್ಯಂತ ಆತಂಕಕ್ಕೆ ಕಾರಣ ವಾಗಿತ್ತು. ಆ ಎಂಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೇ ಇಲ್ಲದಿರುವುದು ಘಟನೆಗೆ ಪ್ರಮುಖ ಕಾರಣವಾಗಿತ್ತು.
ಇಂಥ ಘಟನೆ ಬೇರೆ ಕಡೆ ಮರುಕಳಿಸದಂತೆ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ರಾಜ್ಯ ಸರ್ಕಾರ ಎಲ್ಲಾ ಬ್ಯಾಂಕ್ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೆ, ಬ್ಯಾಂಕುಗಳು ಆ ಆದೇಶಕ್ಕೆ ಕಿಮ್ಮತು ನೀಡಿದಂತೆ ಕಾಣುತ್ತಿಲ್ಲ. ನಗರದ ಬಹುತೇಕ ಕಡೆ ಎಟಿಎಂಗಳು ಕಾವಲು ಸಿಬ್ಬಂದಿಯೇ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ.
ಸ್ಮಾರ್ಟ್ಸಿಟಿಯಾಗಿ ಆಯ್ಕೆ ಯಾಗಿರುವ ದಾವಣಗೆರೆ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಪ್ರತಿದಿನ ಕೋಟ್ಯಂತರ ರೂಪಾಯಿ ವಹಿವಾಟು ಎಟಿಎಂಗಳ ಮೂಲಕವೇ ನಡೆಯುತ್ತಿದೆ.
ಆದರೆ, ಬಹುತೇಕ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ಇಲ್ಲದಿರುವ ಕಾರಣ ಬೆಂಗಳೂರಿನಂಥ ಘಟನೆ ದಾವಣಗೆರೆಯಲ್ಲೂ ನಡೆಯಬಹುದು ಎನ್ನುವ ಆತಂಕ ಗ್ರಾಹಕರಿಗಿದೆ ಎನ್ನುತ್ತಾರೆ ಹೆಲ್ಪ್ಲೈನ್ ಗ್ರಾಮೀಣ ಅಭಿವೃದ್ಧಿ ಸಂಘಟನೆಯ ಸುಬಾನ್.
ಜಿಲ್ಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತಿತರ ರಾಷ್ಟ್ರೀಕೃತ ಬ್ಯಾಂಕ್ಗಳು, ಕರ್ಣಾಟಕ, ಐಸಿಐಸಿಐ, ಆ್ಯಕ್ಸಿಸ್ ಮೊದಲಾದ ಖಾಸಗಿ ಬ್ಯಾಂಕುಗಳ ಒಟ್ಟು 230ಕ್ಕೂ ಹೆಚ್ಚು ಶಾಖೆಗಳಿವೆ. 200ಕ್ಕೂ ಹೆಚ್ಚು ಎಟಿಎಂಗಳು ಕಾರ್ಯ ನಿರ್ವಹಿಸುತ್ತಿವೆ.
ನಗರದಲ್ಲಿ ಮಂಡಿಪೇಟೆ, ವಿದ್ಯಾನಗರ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಎಂಸಿಸಿ ‘ಎ’, ಎಂಸಿಸಿ ‘ಬಿ’ ಬ್ಲಾಕ್, ಪಿ.ಜೆ.ಬಡಾವಣೆ ಸೇರಿದಂತೆ ಅನೇಕ ಪ್ರಮುಖ ಎಟಿಎಂ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ವ್ಯವಹರಿಸುತ್ತಾರೆ.
ಈ ಜನನಿಬಿಡ ಪ್ರದೇಶಗಳಲ್ಲಿರುವ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸ ಬೇಕು. ಕೆಲವು ನಿರ್ಜನ ಪ್ರದೇಶದಲ್ಲಿ ಎಟಿಎಂಗಳು ಆರಂಭವಾಗಿದ್ದು, ಅಂತಹ ಕಡೆ ಹಣ ಪಡೆಯಲು ರಾತ್ರಿ ವೇಳೆ ಗ್ರಾಹಕರು ಆತಂಕಗೊಂಡೇ ಹೋಗ ಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಬ್ಯಾಂಕ್ ಅಧಿಕಾರಿಗಳು ಗಮನಹರಿಸಬೇಕು ಎಂದು ಹೆಲ್ಪ್ಲೈನ್ನ ಅಧ್ಯಕ್ಷ ಮಹಮದ್ ಅಸ್ಲಂ ಒತ್ತಾಯಿಸುತ್ತಾರೆ.
ಮಾಹಿತಿ ಇಲ್ಲ: ನಗರದಲ್ಲಿ ಎಷ್ಟು ಎಟಿಎಂಗಳಿವೆ ಎನ್ನುವ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಪ್ರತ್ಯೇಕವಾಗಿ ಪ್ರತಿ ಬ್ಯಾಂಕಿನ ಅಧಿಕಾರಿಗಳಿಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಯಂ ಸಿಬ್ಬಂದಿ ನೇಮಿಸಿ: ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಇದುವರೆಗೂ ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಎಟಿಎಂಗಳ ಮೇಲೆ ಅವಲಂಬಿತರಾಗಿರುವ ಗ್ರಾಹಕರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಎಟಿಎಂ ಕೇಂದ್ರಗಳಲ್ಲಿ ಕಾಯಂ ಭದ್ರತಾ ಸಿಬ್ಬಂದಿ ನೇಮಿಸಿ, ಗ್ರಾಹಕರ ಆತಂಕ ನಿವಾರಿಸಬೇಕು ಎನ್ನುತ್ತಾರೆ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.