ADVERTISEMENT

ತ್ಯಾಗ ಮನೋಭಾವ ಬೆಳೆಸಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 5:25 IST
Last Updated 12 ಅಕ್ಟೋಬರ್ 2011, 5:25 IST

ಮಲೇಬೆನ್ನೂರು: ಮಹಾನ್ ಸಾಧಕರ ಸಾಧನೆ ಹಿಂದೆ ಇರುವ ತ್ಯಾಗ ಮನೋಭಾವವೇ ಸ್ಫೂರ್ತಿ ಎಂದು ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.  

ಸಮೀಪದ ನಂದಿಗುಡಿ ವೃಷಭಪುರಿ ಸಂಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಭೂಮಿ ಹುಣ್ಣಿಮೆ ಶಿವಾನುಭವಗೋಷ್ಠಿ ಶರಣ ಜಾಗೃತಿ ಸಭೆ~ ಉದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು.

ಪ್ರಸಕ್ತ ದಿನ ಚರ್ಚೆಗೆ ಗ್ರಾಸವಾಗಿರುವ ಲಂಚದ ವಿರುದ್ಧದ ಜನಜಾಗೃತಿ ಸ್ವಾಗತಾರ್ಹ. ಲಂಚ ಕೊಡುವುದನ್ನು ಬಿಟ್ಟರೆ ಲಂಚಗುಳಿತನ ತಾನೆ ತಾನಾಗಿ ನಿರ್ಮೂಲನವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಂಸ್ಕೃತಿ ಅರಿವು ಮೂಡಿಸುವುದು ಅಗತ್ಯ. ಯುವಕರು ಗೋಷ್ಠಿಗಳ ತಿರುಳು ಅರಿತು ಸಮಾಜದ  ತಪ್ಪು ತಿದ್ದಲು ಕಾರ್ಯೋನ್ಮುಖರಾಗಿ ಎಂದು ಸಲಹೆ ನೀಡಿದರು.

ಈ ನೆಲದ ಸಂಸ್ಕೃತಿ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ಹಾಳಾಗುತ್ತಿದೆ. ಯುವಜನತೆ ಹಾದಿ ತಪ್ಪಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವುಗಳನ್ನು ತಪ್ಪಿಸಲು ಮಠಮಾನ್ಯ, ವಿದ್ಯಾಸಂಸ್ಥೆಗಳಲ್ಲಿ ನೀತಿಪಾಠ ಅಳವಡಿಸುವುದು ಅವಶ್ಯ ಎಂದು ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜನತೆ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವತ್ತ ವಿವಿಧ ಜನಾಂಗದವರೊಂದಿಗೆ ಸಾಮರಸ್ಯ ಮನೋಭಾವ ಬೆಳೆಸಿಕೊಳ್ಳಿ ಎಂದು ನಂದಿಗುಡಿ ಪೀಠಾಧಿಪತಿ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನೊಳಂಬ ಸಮಾಜ ಜನತೆಗೆ ಕಿವಿಮಾತು ಹೇಳಿದರು.

ಸಿ.ಎಸ್. ದೊಡ್ಡಬಸಣ್ಣನವರ್, ಡಿ.ಸಿ. ಪಾಟೀಲ್ ಉಪನ್ಯಾಸ ನೀಡಿದರು. ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ಪ್ರಸನ್ನಕುಮಾರ್, ಹಾವೇರಿ ಪಿಎಸ್‌ಐ  ಯು.ಎಚ್. ಸಾತೇನಹಳ್ಳಿ, ಅಬಕಾರಿ ನಿರೀಕ್ಷಕಿ ಪ್ರತಿಭಾ  ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಯು.ಜಿ. ಬಣಕಾರ್, ಉಕ್ಕಡಗಾತ್ರಿ ಚನ್ನಬಸಪ್ಪ, ಈಶ್ವರಪ್ಪ ಎಣ್ಣೇರ್, ಗುಡ್ಡಪ್ಪ, ವೀರನಗೌಡ, ಪಕಾಶ್, ಡಿಇಡಿ, ಬಿಇಡಿ ಪ್ರಶಿಕ್ಷಣಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಂತೋಷ್ ಸ್ವಾಗತಿಸಿದರು. ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿವರಾಜ್ ಪಾಟೀಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.