ADVERTISEMENT

ತ್ಯಾಗ, ಸೇವೆಯಿಂದ ಬದುಕು ಸಾರ್ಥಕ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 10:15 IST
Last Updated 4 ಮಾರ್ಚ್ 2011, 10:15 IST

ದಾವಣಗೆರೆ: ಸ್ವಾರ್ಥ ತುಂಬಿದ ಸಮಾಜವನ್ನು ತಿದ್ದುವಲ್ಲಿ ಸದ್ಯೋಜಾತ ಶ್ರೀಗಳ ಸೇವೆ ಅವಿಸ್ಮರಣೀಯ ಎಂದು ಹಾಸ್ಯ ಉಪನ್ಯಾಸಕಿ ಇಂದುಮತಿ ಸಾಲಿಮಠ ಹೇಳಿದರು.ನಗರದಲ್ಲಿ ಗುರುವಾರ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ 3ನೇ ಸಂಸ್ಮರಣೋತ್ಸವದಲ್ಲಿ ‘ಅಧ್ಯಾತ್ಮದಲ್ಲಿ ಹಾಸ್ಯ’  ಕುರಿತು ಅವರು ಮಾತನಾಡಿದರು.

ಮನುಷ್ಯನ ಆಸೆಗೆ ಮಿತಿಯಿಲ್ಲ. ಒಳ್ಳೆಯದು ಎಲ್ಲವೂ ಬೇಕು ಎನ್ನುವ ಲಾಲಸೆ ಅವನಲ್ಲಿದೆ. ಇಂಥ ಸ್ವಾರ್ಥ ತುಂಬಿದ ಸಮಾಜವನ್ನು ತಿದ್ದುವಲ್ಲಿ ಅನುಭಾವಿಗಳು, ಮಹಾತ್ಮರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಬದುಕಿನ ಸಾರ್ಥಕತೆಗೆ ತ್ಯಾಗ ಸೇವಾ ಮನೋಭಾವ ಮುಖ್ಯ ಎಂದರು.ಸಾಲಿಮಠ ಅವರ ಹಾಸ್ಯ ಸ್ಯಾಂಪಲ್: ಯುವಕನ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದಾಗ ಆತ ಹೊಡೆಯಲು ಮುಂದಾದನಂತೆ. ದೇವರು ಯಾಕೆ ಹೊಡೆಯುತ್ತಿ ಎಂದು ಕೇಳಿದ.

ಅರೆ! ತಪಸ್ಸು ಮಾಡಿದಾಕ್ಷಣ ನೀನೇ ಬಂದೆಯಾ? ರಂಭೆ ಊರ್ವಶಿಯವರನ್ನು ಕಳುಹಿಸಿಲ್ಲ ಯಾಕೆ? ಎಂದು ಕೇಳಿದನಂತೆ ‘ತಪಸ್ವಿ’.
ಹಿಂದೆ ಹೆಣ್ಣುಮಕ್ಕಳು ಸರದಾರ ನನಗಂಡ... ಎಂದು ಹಾಡುತ್ತಿದ್ದರೆ ಇಂದಿನವರು ಬಹದ್ದೂರು ನನಗಂಡ ಕ್ಲಬ್ಬಿಗೆ ಹೋಗ್ಯಾನ... ಅನ್ನುತ್ತಾರಂತೆ.
ಆಹಾರ ಪದ್ಧತಿ ಬದಲಾವಣೆ ಬಗ್ಗೆ ಮಾತನಾಡಿ, ‘ನನಹೆಂಡ್ತಿ ಮಾಡ್ತಾಳ ಇಡ್ಲಿ ಸಾಂಬಾರು ವಡ... ಅದ ತಿಂದು ನಾನಾಗೀನಿ ಹಳೇ ಪ್ಲಾಸ್ಟಿಕ್ ಕೊಡ...’

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಎಂ.ಎನ್.ಜೆ.ಬಿ. ಆರಾಧ್ಯ, ಮಲ್ಲೋಕಾರಾಧ್ಯ ಉಪಸ್ಥಿತರಿದ್ದರು. ಪುಟ್ಟಮ್ಮ ಮಹಾರುದ್ರಯ್ಯ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.