ADVERTISEMENT

`ದರ್ಪ ಪ್ರದರ್ಶನಕ್ಕೆ ಅಧಿಕಾರ ಬಳಸದಿರಿ'

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 6:49 IST
Last Updated 4 ಜೂನ್ 2013, 6:49 IST

ಹರಿಹರ: ಸನ್ಮಾನಗಳು ಸಂಕೋಚಕ್ಕೆ ಎಡೆ ಮಾಡಿಕೊಡುವ ಜತೆಗೆ ಸನ್ಮಾನ ಸ್ವೀಕರಿಸುವ ವ್ಯಕ್ತಿಯ ಜೀವಪರ ಕಾಳಜಿಯನ್ನು ಕೊಲ್ಲುತ್ತದೆ ಎಂದು ನಗರಸಭೆ ಸದಸ್ಯ ಪತ್ರಕರ್ತ ಜಿ. ಸುರೇಶ ಗೌರವ ಸ್ವೀಕರಿಸಿ, ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಭಾನುವಾರ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕದಿಂದ ನಡೆದ ಪ್ರತಿಭಾ ಪುರಸ್ಕರ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸನ್ಮಾನಗಳಿಂದ ಪಾಳೇಗಾರಿಕೆ ಸಂಸ್ಕೃತಿ ಹುಟ್ಟುವ ಅವಕಾಶಗಳೇ ಹೆಚ್ಚಾಗಿರುತ್ತವೆ. ಅಧಿಕಾರ, ಹಣ ಮತ್ತು ಜನ ಬಲ ಸ್ವಂತಕ್ಕಿಂತ ಹೆಚ್ಚಾಗಿ ಸಮಾಜದ ಹಿತಕ್ಕಾಗಿ ಎಂಬುದನ್ನು ಮರೆಯಬಾರದು. ದೊರೆತ ಅಧಿಕಾರವನ್ನು ದರ್ಪ ಪ್ರದರ್ಶನಕ್ಕಾಗಿ ಬಳಸದೇ ಸಾರ್ವಜನಿಕ ಸೇವೆಗೆ ಸಮರ್ಥವಾಗಿ ಬಳಿಸಿಕೊಳ್ಳಬೇಕು ಎಂದು ತಿಳಿಸಿದರು.

2012-13ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಎಂ.ಎನ್. ಗಿರೀಶ್ ಶೇ 98.84, ಆರ್. ಸಹನಾ ಶೇ 92 ಹಾಗೂ ಕನ್ನಡ ಭಾಷೆಯಲ್ಲಿ ಬಿ.ವಿ. ಸುಷ್ಮಿತಾ (124) ಮತ್ತು ಜೆ.ಎಸ್. ನಾಮದೇವ (118) ಅವರನ್ನು ಗೌರವಿಸಲಾಯಿತು.

ಪಿಯು ವಿಜ್ಞಾನ ವಿಭಾಗದಲ್ಲಿ ಎಂ.ಎನ್. ಗಣೇಶ್ ಶೇ 93, ಅನುಷಾ ಶೇ 91, ವಾಣಿಜ್ಯ ವಿಭಾಗದಲ್ಲಿ ಬಿ.ಎಂ. ನಿರ್ಮಲಾ ಶೇ 87, ಎಂ.ಎಚ್. ಶ್ವೇತಾ ಶೇ 84, ಕಲಾ ವಿಭಾಗದಲ್ಲಿ ಎಸ್.ಸಿ. ಮೋಹನ ಶೇ 88 ಮತ್ತು ಜಿ.ಎಸ್. ನಾಗಮ್ಮ ಶೇ 74.66 ಅವರನ್ನು ಗೌರವಿಸಲಾಯಿತು.

ಸರ್ಕಾರಿ ಸೇವೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಜಿ. ಸೋಮಪ್ಪ, ಬಿ.ಎಸ್. ಸದಾಶಿವ, ರೇವಣಸಿದ್ದಪ್ಪ ಅಂಗಡಿ ಅವರನ್ನು ಗೌರವಿಸಲಾಯಿತು.

ತಾಲ್ಲೂಕು ಪಂಚಮಸಾಲಿ ಘಟಕದ ಗೌರವಾಧ್ಯಕ್ಷ ಎನ್.ಜಿ. ನಾಗನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ. ಶೇಖರಪ್ಪ ಗುಳದಹಳ್ಳಿ, ಚಂದ್ರಶೇಖರ್ ಪೂಜಾರ್, ಯೋಗೀಶ್ ಪಾಟೀಲ್, ಲತಾ ಕೊಟ್ರೇಶ್, ಬಿ. ಪಾಲಾಕ್ಷಿ ಉಪಸ್ಥಿತರಿದ್ದರು.

ರೂಪಾ ಮಂಜುನಾಥ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಿ.ಟಿ. ಮಂಜಪ್ಪ ಸ್ವಾಗತಿಸಿದರು. ಬಿ.ಎನ್. ವೀರಪ್ಪ ಪ್ರಾಸ್ತಾವಿಕ ಮಾತನಾಡಿದರು. ಗದಿಗೆಪ್ಪ ವೈ. ಹಳೇಮನಿ ವಂದಿಸಿದರು. ಕಲಿವೀರ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.