ADVERTISEMENT

ದೂಡಾ ಅಧ್ಯಕ್ಷರ ಅವ್ಯವಹಾರ: ಹೆಂಡ್ತಿ ಮನೇಲಿ ಗಂಡನೇ ಬಾಡಿಗೆದಾರ!

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 9:30 IST
Last Updated 3 ಜೂನ್ 2012, 9:30 IST

ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ)ದ ಅಧ್ಯಕ್ಷ ಜೆ. ಮಲ್ಲಿಕಾರ್ಜುನಪ್ಪ ಅವರು ಹೆಂಡತಿ ಹೆಸರಲ್ಲಿ ನಕಲಿ ಬಾಡಿಗೆ ಕರಾರುಪತ್ರ ಸೃಷ್ಟಿಸಿ ಸರ್ಕಾರದಿಂದ ಬಾಡಿಗೆ ಭತ್ಯೆ ಪಡೆಯುತ್ತಿದ್ದಾರೆ  ಎಂದು ಜಾತ್ಯತೀತ ಜನತಾದಳ (ಜೆಡಿಎಸ್) ಯುವಘಟಕದ ಅಧ್ಯಕ್ಷ ಜೆ. ಅಮಾನುಲ್ಲಾ ಖಾನ್ ಆರೋಪಿಸಿದರು.

`ದೂಡಾ~ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ತಮ್ಮ ಸ್ವಂತ ಮನೆಗೆ ಹೆಂಡತಿ ರತ್ನಾ ಅವರ ಹೆಸರಲ್ಲಿ ನಕಲಿ ಬಾಡಿಗೆ ಕರಾರುಪತ್ರ ಸೃಷ್ಟಿಸಿದ್ದಾರೆ. 2011ರ ಡಿಸೆಂಬರ್‌ನಿಂದ ಪ್ರತಿ ತಿಂಗಳು ಸರ್ಕಾರದಿಂದ ರೂ 9,500 ಮನೆಬಾಡಿಗೆ ಭತ್ಯೆ ಪಡೆದು ಅಕ್ರಮ ಎಸಗಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದ (ಆರ್‌ಟಿಐ) ಅಡಿ `ದೂಡಾ~ದಿಂದ ನಾನು ಮಾಹಿತಿ ಪಡೆದಿದ್ದು, ಅದರಲ್ಲಿ ಈ ಅಂಶಗಳು ಬಹಿರಂಗಗೊಂಡಿವೆ. ಆದ್ದರಿಂದ ಸರ್ಕಾರ ಕೂಡಲೇ ಮಲ್ಲಿಕಾರ್ಜುನಪ್ಪ ಅವರನ್ನು `ದೂಡಾ~ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಶಿಸ್ತಿನ ಪಕ್ಷವೆಂದು ಬಿಂಬಿತವಾಗಿರುವ ಬಿಜೆಪಿ ಅವ್ಯವಹಾರದಲ್ಲಷ್ಟೇ ಶಿಸ್ತು ಕಾಪಾಡುತ್ತಿದೆ ಹೊರತು ಅಭಿವೃದ್ಧಿ ಕಾರ್ಯಗಳಲ್ಲಿ ಅಲ್ಲ. ಪ್ರಭಾವಿ  ವ್ಯಕ್ತಿಗಳ ಪ್ರಭಾವ ಬಳಸಿ, ಹಲವು ಅಕ್ರಮಗಳು `ದೂಡಾ~ದಲ್ಲಿ  ನಡೆದಿವೆ. ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನಕಲಿ ಅಫಿಡವಿಟ್ಟು ಸೃಷ್ಟಿಸಿ ನಿವೇಶನ ನೀಡಲಾಗಿದೆ. ಅಲ್ಲದೇ, ಶಾಮನೂರು ವ್ಯಾಪ್ತಿಯಲ್ಲಿ 70 ಎಕರೆಯಲ್ಲಿ ನಿರ್ಮಿಸಬೇಕಾಗಿದ್ದ ನ್ಯಾಷನಲ್  ಪಾರ್ಕ್‌ನ ನಿವೇಶನದಲ್ಲೂ ಅವ್ಯವಹಾರ ನಡೆದಿದೆ. ಈ ಕುರಿತು ಆರ್‌ಟಿಐ ಅಡಿ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಒಟ್ಟಾರೆ `ದೂಡಾ~ದ ಅವ್ಯವಹಾರ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್ ಮಾತನಾಡಿ, `ಸರ್ಕಾರ ತಕ್ಷಣವೇ ಮಲ್ಲಿಕಾರ್ಜುನ ಅವರನ್ನು ವಜಾ ಮಾಡಬೇಕು. ಮನೆ ಬಾಡಿಗೆ ಭತ್ಯೆ ಪಡೆಯಲು ಕಾನೂನುಬಾಹಿರ ಚಟುವಟಿಕೆ ನಡೆಸಿರುವ ಮಲ್ಲಿಕಾರ್ಜುನಪ್ಪ `ದೂಡಾ~ದಲ್ಲಿ ಇನ್ನೆಷ್ಟು ಅವ್ಯವಹಾರ ಎಸಗಿರಬಹುದು ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಬಿ. ದಾದಾಪೀರ್, ಜಿ. ಅಸ್ಕರ್, ಕೆ. ಹನೀಫ್ ಸಾಬ್, ಬಾತಿ ಶಂಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.