ADVERTISEMENT

ನೀರು, ಇಂಧನ, ವನ್ಯಜೀವಿ ಉಳಿವಿಗೆ ಯುವಕರ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 6:41 IST
Last Updated 2 ಅಕ್ಟೋಬರ್ 2017, 6:41 IST

ಹರಪನಹಳ್ಳಿ: ನೀರು, ಇಂಧನ, ವನ್ಯಜೀವಿಗಳನ್ನು ಉಳಿಸಿ ಎಂದು ಒತ್ತಾಯಿಸಿ ಯುವಕರ ತಂಡವೊಂದು ಅಂತರ ರಾಜ್ಯ ಸೈಕಲ್‌ ಜಾಥಾ ಆರಂಭಿಸಿದ್ದು, ಭಾನುವಾರ ತಾಲ್ಲೂಕಿಗೆ ಜಾಥಾ ಆಗಮಿಸಿತು.

ಸ್ಫೂರ್ತಿ ಜೂನಿಯರ್‌ ಚೇಂಬರ್‌ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು ಜಾಥಾವನ್ನು ಬರಮಾಡಿಕೊಂಡರು. ಮುಖಂಡರಾದ ಪ್ರಸನ್ನಕುಮಾರ್ ಮತ್ತು ಶಿವಕುಮಾರ್‌ ಮಾತನಾಡಿ, ‘ಶಿವಮೊಗ್ಗದಿಂದ ಮಂತ್ರಾಲಯವರೆಗೆ ಸುಮಾರು 777 ಕಿ.ಮೀ. ಜಾಥಾ ಸಂಚರಿಸಲಿದೆ. ಈ ಮಾರ್ಗದಲ್ಲಿ ಬರುವ ಪ್ರತಿಯೊಂದು ಹಳ್ಳಿಯಲ್ಲಿ ನೀರು, ಇಂಧನ ಮತ್ತು ವನ್ಯ ಜೀವಿಗಳನ್ನು ಉಳಿಸುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

‘ಪ್ರಕೃತಿದತ್ತ ಕೊಡುಗೆಗಳನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ನೀಡುವುದು ಇಂದಿನ ಅಗತ್ಯ. ಪ್ರಸ್ತುತ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೆಚ್ಚು ಇಂಧನ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಕಾಡು ನಾಶವಾಗುತ್ತಿದ್ದು, ವನ್ಯಜೀವಿಗಳ ಹತ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ’ ಎಂದರು.

ADVERTISEMENT

ಶಿವಮೊಗ್ಗ ಸೈಕಲ್‌ ಕ್ಲಬ್‌ ಈ ಜಾಥಾ ಏರ್ಪಡಿಸಿದ್ದು ಮೂರ್ತಿ, ಗಿರೀಶ್‌ ಕಾಮತ್‌, ಗಣೇಶ್‌ ಕಾಮತ್‌, ರಜನಿಕಾಂತ್‌, ಶ್ರೀಕಾಂತ್‌, ಮಹಮದ್‌ರಫಿ, ರವಿ, ಅಮಿತ್‌ ಸೇರಿದಂತೆ 17 ಸೈಕಲಿಸ್ಟ್‌ಗಳು ಭಾಗವಹಿಸಿದ್ದಾರೆ. ಜೆಸಿ ಕ್ಲಬ್‌ನ ವೀರೇಶ್‌, ಶಿವಕುಮಾರ್‌ ನಾಯ್ಕ, ಇರ್ಷದ್‌ ಭಾಷಾ, ರವಿಶಂಕರ್‌, ನಜೀರ್‌ ಹುಸೇನ್‌, ಕೊಟ್ರೇಶ್‌, ಮೋರಗೇರಿ ಹೇಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.